ಚಿತ್ರದುರ್ಗ ಡಿಸೆಂಬರ್ 25: ಚಿತ್ರದುರ್ಗದ ಹಿರಿಯೂರು ಪಟ್ಟಣದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ ಒಟ್ಟು ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಹಿರಿಯೂರಿನ ಗೊರ್ಲತ್ತು ಬಳಿ ದುರಂತಕ್ಕೀಡಾಗಿದೆ. ಟ್ಯಾಂಕರ್ ಬಂದು ಬಸ್ ಗೆ ಡಿಕ್ಕಿ ಹೊಡೆದಿದ್ದು, ಇದರ ರಭಸಕ್ಕೆ ಇಡೀ ಬಸ್ ಸುಟ್ಟು ಕರಕಲಾಗಿದೆ. ಇನ್ನು ಬಸ್ನಲ್ಲಿದ್ದ ಕೆಲ ಪ್ರಯಾಣಿಕರು ಸಹ ಸುಟ್ಟು ಕರಕಲಾಗಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಕಥೆ ಕೇಳಿದ್ರೆ ಕರುಳು ಚುರುಕ್ ಎನ್ನುತ್ತೆ. ಕೆಲವರು ಬ್ಯಾಚ್ಯುಲರ್ ಪಾರ್ಟಿಗೆ ತೆರಳುತ್ತಿದ್ದ, ಇನ್ನು ಕೆಲವರು ಗೋಕರ್ಣಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು. ಆದ್ರೆ, ವಿಧಿ ಅವರನ್ನ ಬಲಿ ಪಡೆದುಕೊಂಡಿದೆ. ಪ್ರಸ್ತುತ ಮೃತದೇಹಗಳ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಜೊತೆಗೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಕಿಯಲ್ಲಿ ಬೆಂದು ಕರಕಲಾಗಿರುವ ಮೃತದೇಹಗಳ ಗುರುತು ಪತ್ತೆ ಮಾಡೋದೇ ಸವಾಲಿನ ಕೆಲಸವಾಗಿದೆ. ಈ ಮಧ್ಯೆ ತಂದೆಯೊಬ್ಬರು ಮಗಳ ಮೃತದೇಹ ಪತ್ತೆಹಚ್ಚಿದ್ದಾರೆ. ಕೊರಳಲ್ಲಿದ್ದ ಸರ ನೋಡಿ ಇವಳೇ ನನ್ನ ಮಗಳು ಎಂದು ಗುರುತು ಹಿಡಿದಿದ್ದಾಳೆ.
ಜೀವ ಕಳೆದುಕೊಂಡ ಯುವತಿಯ ಹೆಸರು ಮಾನಸ. ತಂದೆ ಚಂದ್ರಗೌಡ ನೀಡಿದ ಮಾಹಿತಿಯಂತೆ, ಮಾನಸ ಮೂಲತಃ ಚನ್ನರಾಯಪಟ್ಟಣದವಳು. ನನ್ನ ಮಗಳು ಶನಿವಾರ ಅಥವಾ ಭಾನುವಾರ ಊರಿಗೆ ಬರ್ತೀನಿ ಎಂದಿದ್ದಳು. ಆಮೇಲೆ ಮದುವೆ ಡೇಟ್ ಫಿಕ್ಸ್ ಮಾಡೋಣ ಅಂತ ಹೇಳಿದ್ದಳು. ಆಕೆಗೆ ಮದುವೆ ಫಿಕ್ಸ್ ಆಗಿತ್ತು ಎಂದು ಕಣ್ಣೀರು ಇಟ್ಟಿದ್ದಾರೆ.



