DAKSHINA KANNADA
ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಮಕ್ಕಳು ಸಾವು- ಕುಟುಂಬಕ್ಕೆ ₹11.5 ಲಕ್ಷ ಪರಿಹಾರ
ಸುಬ್ರಹ್ಮಣ್ಯ, ಆಗಸ್ಟ್ 03: ಪರ್ವತಮುಖಿಯಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು.
ಭಾರಿ ಮಳೆಯಿಂದಾಗಿ ಸೋಮವಾರ ರಾತ್ರಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಪಂಜದ ಕರಿಮಜಲು ಕುಸುಮಾಧರ ಮತ್ತು ರೂಪಶ್ರೀ ದಂಪತಿಯ ಮಕ್ಕಳಾದ ಶ್ರುತಿ (11) ಮತ್ತು ಗಾನಶ್ರೀ (6) ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು.
ಘಟನೆ ವೇಳೆ ಮೂವರು ಮನೆಯಿಂದ ಹೊರಗೆ ಓಡಿ ಪಾರಾಗಿದ್ದರು. ಘಟನೆ ನಡೆದ ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಮೇಲಕ್ಕೆತ್ತಲಾದರೂ ಬದುಕಿಸುವ ಪ್ರಯತ್ನ ಕೈಗೂಡಲಿಲ್ಲ. ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿಯೇ ಮನೆಯವರಿಗೆ ಹಸ್ತಾಂತರಿಸಲಾಯಿತು. ಪುಟ್ಟ ಮಕ್ಕಳ ಸಾವು ಇಡೀ ಸುಬ್ರಹ್ಮಣ್ಯ ಪರಿಸರದ ಜನತೆಯನ್ನು ಕಣ್ಣೀರಲ್ಲಿ ಮುಳುಗಿಸಿದೆ.
ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರದಿಂದ ಮಂಜೂರಾದ ₹ 11.5 ಲಕ್ಷ ಮೊತ್ತದ ಒಟ್ಟು ಮೂರು ಚೆಕ್ ಅನ್ನು ಸಚಿವ ಎಸ್.ಅಂಗಾರ ಅವರು ಮನೆಯವರಿಗೆ ವಿತರಿಸಿದರು. ಕಡಬ ತಹಶೀಲ್ದಾರ್ ಅನಂತ ಶಂಕರ ಇದ್ದರು. ಶ್ರುತಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯಲ್ಲಿ 5ನೇ ತರಗತಿ ಹಾಗೂ ಗಾನಶ್ರೀ ಸುಬ್ರಹ್ಮಣ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಕಲಿಯುತ್ತಿದ್ದರು.
You must be logged in to post a comment Login