ತಿರುವನಂತಪುರಂ ಮೇ 07: ಕಾಂಗ್ರೆಸ್ ಶಾಸಕಿ ಬಿಂದು ಕೃಷ್ಣ ಅವರು ಸಾರ್ವಜನಿಕವಾಗಿ ಸ್ವಾಗತಿಸುತ್ತಿದ್ದ ವೇಳೆ ಹಿರಿಯ ನಾಯಕ ಚೆರಿಯನ್ ಫಿಲಿಪ್ ಅವರು ಅಪ್ಪಿಕೊಳ್ಳಲು ಯತ್ನಿಸಿದ ಘಟನೆ ಈಗ ವಿವಾದಕ್ಕೆ ಕಾರಣವಾಗಿದೆ. ಈ ನಡವಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳ ಪ್ರಕಾರ, ಶಾಸಕಾಂಗ ಪಕ್ಷದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಶಾಸಕಿ ಬಿಂದು ಕೃಷ್ಣ ಅವರು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದರು. ಅವರು ಕೈ ಮುಗಿದು ನಾಯಕರಿಗೆ ನಮಸ್ಕರಿಸುತ್ತಾ ಒಳಬರುತ್ತಿದ್ದಂತೆ, ಅಲ್ಲೇ ಇದ್ದ ಹಿರಿಯ ನಾಯಕ ಚೆರಿಯನ್ ಫಿಲಿಪ್ ಅವರು ಶಾಸಕಿಯನ್ನು ಅಪ್ಪಿಕೊಂಡು ಶುಭಾಶಯ ತಿಳಿಸಿಲು ಮುಂದಾಗಿದ್ದಾರೆ. ಇದರಿಂದ ತಕ್ಷಣವೇ ವಿಚಲಿತರಾದ ಶಾಸಕಿ ಬಿಂದು ಕೃಷ್ಣ, ಅವರನ್ನು ಹಿಂದಕ್ಕೆ ದೂಡಿ, ಅಲ್ಲಿಂದ ಮುಂದಕ್ಕೆ ನಡೆಯಲು ಯತ್ನಿಸಿದ್ದಾರೆ.

ಅದಾದ ಬಳಿಕವೂ ಚೆರಿಯನ್ ಫಿಲಿಪ್ ಅವರು ಮತ್ತೆ ಶಾಸಕಿಯ ಬಳಿ ಬಂದು ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆದರೆ, ಬಿಂದು ಕೃಷ್ಣ ಅವರು ಕೈ ಮುಗಿದುಕೊಂಡೇ ಅವರಿಂದ ಸ್ಪಷ್ಟವಾದ ಅಂತರ ಕಾಯ್ದುಕೊಂಡು ಮುಂದಕ್ಕೆ ಸಾಗಿದ್ದಾರೆ. ಪಕ್ಷದ ಇತರ ನಾಯಕರು, ಪತ್ರಕರ್ತರು ಮತ್ತು ಕ್ಯಾಮೆರಾಗಳ ಮುಂದೆಯೇ ಈ ಘಟನೆ ನಡೆದಿದ್ದು, ತೀವ್ರ ಮುಜುಗರಕ್ಕೆ ಕಾರಣವಾಗಿದೆ.