DAKSHINA KANNADA
ಶಾಲಾ ಬಾಲಕಿಗೆ ಸ್ಪ್ರೇ ಸಿಂಪಡಿಸಿ ಪ್ರಜ್ಞೆ ತಪ್ಪಿಸಿ ಪರಾರಿಯಾದ ದುಷ್ಕರ್ಮಿಗಳು
ಪುತ್ತೂರು ಜನವರಿ 5: ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಆನೆಕಾರ್ ಎಂಬಲ್ಲಿ ಶಾಲಾ ಬಾಲಕಿಯೊಬ್ಬಳಿಗೆ ಬೈಕ್ ನಲ್ಲಿ ಬಂದ ಅಪರಿಚಿತರು ಸ್ಪ್ರೇ ಸಿಂಪಡಿಸಿ ಆಕೆಯನ್ನು ಪ್ರಜ್ಞೆ ತಪ್ಪಿಸಿ ಪರಾರಿಯಾದ ಘಟನೆ ನಡೆದಿದ್ದು, ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ರಾಗಿಯಡ್ಕದ ಬಾಲಕಿ ಕುಕ್ಕುಜಡ್ಕ ಶಾಲೆಗೆ ಮಧ್ಯಾಹ್ನ ಬರುತ್ತಿದ್ದಾಗ ಆನೆಕಾರ ಸಮೀಪ ಬೈಕ್ನಲ್ಲಿ ಬಂದ ವ್ಯಕ್ತಿಗಳು ಬಾಲಕಿಯನ್ನು ಅಪಹರಣಕ್ಕೆ ಯತ್ನಿಸಿದ್ದು, ರಾಸಾಯನಿಕವೊಂದನ್ನು ಸ್ಪ್ರೇ ಮಾಡಿ ಬಾಲಕಿಯ ಪ್ರಜ್ಞೆ ತಪ್ಪಿಸಿದ್ದಾರೆ ಆದರೆ ಈ ಸಂದರ್ಭ ರಸ್ತೆಯಲ್ಲಿ ಬೇರೆ ವಾಹನ ಬರುವ ಶಬ್ಧ ಕೇಳಿ ಆಕೆಯನ್ನು ಅಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದೆ. ಅದೇ ರಸ್ತೆಯಲ್ಲಿ ಬಂದ ರಿಕ್ಷಾದ ಚಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದ ಬಾಲಕಿಯನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ಸ್ಮೃತಿ ಬಂದ ಬಳಿಕ ಯುವತಿ, ಬೈಕಲ್ಲಿ ಬಂದವರು ಸ್ಪ್ರೇ ಮಾಡಿದ್ದಾಗಿ ಹೇಳಿದ್ದಾಳೆ. ಬಾಲಕಿಯನ್ನು ಅಪಹರಿಸಲು ಸ್ಪ್ರೇ ಸಿಂಪಡನೆ ಮಾಡಿರಬಹುದು ಎಂದು ಹೇಳಲಾಗಿದ್ದು, ಪೋಲೀಸರ ತನಿಖೆ ನಂತರವೇ ಸತ್ಯಾಸತ್ಯತೆ ತಿಳಿದು ಬರಬೇಕಿದೆ.
You must be logged in to post a comment Login