ಬೆಂಗಳೂರು, ನವೆಂಬರ್ 08: ಸಿಮೆಂಟ್ ಮಿಕ್ಸರ್ ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದಾಗಿ ಗೋಡೆಯೊಂದು ಕುಸಿದು 1 ವರ್ಷದ ಮಗು ಸಾವನಪ್ಪಿದ ಘಟನೆ ಬೆಂಗಳೂರಿನ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದಿದೆ.

ಮೃತ ಮಗುವನ್ನು ಸಿದ್ದಪ್ಪ ಹಾಗೂ ಲಾವಣ್ಯ ದಂಪತಿಯ ಪುತ್ರ ಪ್ರಣವ್ ಎಂದು ಗುರುತಿಸಲಾಗಿದೆ. ಮಗುವಿಗೆ ಒಂದು ವರ್ಷ 8 ತಿಂಗಳು. ನವೆಂಬರ್ 7ರ ಸಂಜೆ ಹೊಸ ಮನೆಯೊಂದರ ಮೋಲ್ಡಿಂಗ್ ಕೆಲಸ ಮುಗಿಸಿ ಸಿಮೆಂಟ್ ಮಿಕ್ಸರ್ ಲಾರಿ ಹೋಗುತ್ತಿತ್ತು.
ಈ ವೇಳೆ ಮೇಲೆ ಹಾದು ಹೋಗಿರುವ ವೈರಿಂಗ್ ವಿದ್ಯುತ್ ತಂತಿ ಲಾರಿಗೆ ಸಿಲುಕಿಕೊಂಡಿದೆ. ತಕ್ಷಣ ಸ್ಥಳೀಯರು ಕೂಗಿಕೊಂಡಿದ್ದಾರೆ. ಆದರೆ ಚಾಲಕ ಗಮನಿಸದೇ ಲಾರಿ ಚಲಾಯಿಸಿದ್ದರಿಂದ ವೈರಿಂಗ್ ಕಂಬ ಕಿತ್ತು ಬಂದಿದೆ. ಅಲ್ಲದೇ ಮನೆಯ ಗೋಡೆ ಕುಸಿದು ಆಟ ಆಡ್ತಿದ್ದ ಮಗುವಿನ ಮೇಲೆ ಬಿದ್ದಿದೆ ಗಂಭೀರವಾಗಿ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಉಸಿರುಚೆಲ್ಲಿದೆ. ಈ ಘಟನೆ ನಡೆದ ಕೂಡಲೇ ಲಾರಿ ಚಾಲಕ ವಾಹನವನ್ನು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಚಾಲಕನ ನಿರ್ಲಕ್ಷ್ಯಕ್ಕೆ ಒಂದು ಅಮಾಯಕ ಜೀವ ಬಲಿಯಾಗಿದ್ದು, ಮಗುವನ್ನು ಕಳೆದುಕೊಂಡ ಪೋಷಕರ ಗೋಳಾಟ ಮನಕಲಕುವಂತಿದೆ.



