ಚೆನ್ನೈ ಮಾರ್ಚ್ 15: ಕರೂರ್ ಕಾಲ್ತುಳಿತ ಪ್ರಕರಣದ ಮೂರನೇ ಸುತ್ತಿನ ವಿಚಾರಣೆಗೆ ಸಿಬಿಐ ಮುಂದೆ ನಟ ವಿಜಯ್ ಇಂದು ಹಾಜರಾಗಿದ್ದಾರೆ. 41 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ, ಸಿಬಿಐ ತನಿಖೆ ಮುಂದುವರಿದಿದ್ದು, ವಿಜಯ್ ಮತ್ತು ಅವರ ಚಾಲಕನನ್ನು ವಿಚಾರಣೆಗೊಳಪಡಿಸಲಾಗಿದೆ.

2025ರ ಸೆಪ್ಟೆಂಬರ್ 27ರಂದು ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ಘಟನೆಯ ನಂತರ ಕಾರ್ಯಕ್ರಮದ ಆಯೋಜನೆ, ಭದ್ರತಾ ವ್ಯವಸ್ಥೆ, ಜನಸಂದಣಿ ನಿಯಂತ್ರಣ ಮತ್ತು ಪೊಲೀಸ್ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ತನಿಖಾ ದಳ (CBI) ತನಿಖೆ ಆರಂಭಿಸಿತು. ಸುಮಾರು ಏಳು ಗಂಟೆಗಳ ವಿಚಾರಣೆ ಬಳಿಕ ಕಚೇರಿಯಿಂದ ಹೊರಬಂದ ವಿಜಯ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡದೇ ಅಲ್ಲಿ ಸೇರಿದ್ದ ಅಭಿಮಾನಿಗಳತ್ತ ಕೈ ಬೀಸಿ ವಾಹನದಲ್ಲಿ ತೆರಳಿದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.