ಮುಂಬೈ ಜನವರಿ 29: ಅಪ್ಪಾ, ಇವತ್ತು ಅಜಿತ್ ದಾದಾ ಪವಾರ್ ಜೊತೆ ಬಾರಾಮತಿಗೆ ಹೋಗುತ್ತಿದ್ದೇನೆ, ಆಮೇಲೆ ಹೋಟೆಲ್ ತಲುಪಿದ ಮೇಲೆ ನಿಮಗೆ ಕಾಲ್ ಮಾಡುತ್ತೇನೆ . ಮಗಳು ಪಿಂಕಿ ಮಾಲಿ ನನ್ನೊಂದಿಗೆ ಆಡಿದ ಕೊನೆಯ ನುಡಿಗಳಿವು. ನಾಳೆ ಮಾತನಾಡುತ್ತೇನೆ ಎಂದು ಆಕೆ ನೀಡಿದ ಭರವಸೆ ಇನ್ನೆಂದೂ ಈಡೇರುವುದಿಲ್ಲ. ವಿಮಾನ ದುರಂತದಲ್ಲಿ ಅಜಿತ್ ಪವಾರ್ ಅವರೊಂದಿಗೆ ಮಗಳು ಸಹ ಮೃತಪಟ್ಟಿದ್ದಾಳೆ’ ಎಂದು ಪಿಂಕಿಯ ತಂದೆ, ಸೆಂಟ್ರಲ್ ಮುಂಬೈನ ಪ್ರಭಾದೇವಿ ಪ್ರದೇಶದ ನಿವಾಸಿ ಶಿವಕುಮಾರ್ ಮಾಲಿ ಬಿಕ್ಕಳಿಸಿದರು. ಒಬ್ಬ ತಂದೆ ತನ್ನ ಮಗಳ ಆ ಕೊನೆಯ ಕರೆಗಾಗಿ ಕಾಯುತ್ತಲೇ ಉಳಿದರು, ಆದರೆ ಆ ಕರೆ ಬರಲೇ ಇಲ್ಲ.

ಇದು ಅಜಿತ್ ಪವಾರ್ ಅವರ ವಿಮಾನದ ಗಗನಸಖಿ ಪಿಂಕಿ ಮಾಲಿ ಮತ್ತು ಅವರ ತಂದೆಯ ನಡುವೆ ನಡೆದ ಕೊನೆಯ ನೋವಿನ ಸಂಭಾಷಣೆ. ಪಿಂಕಿ ಮಾಲಿ ಅವರು ಅಜಿತ್ ಪವಾರ್ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಇದು ನಾಲ್ಕನೇ ಬಾರಿಯಾಗಿತ್ತು.

ದೆಹಲಿಯ ವಿಎಸ್ಆರ್ ವೆಂಚರ್ಸ್ಗೆ ಸೇರಿದ, ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಶೇಷ ವಿಮಾನದಲ್ಲಿ ಪಿಂಕಿ ಮಾಲಿ ಸಹಾಯಕಿ ಆಗಿದ್ದರು. ಸಿಬ್ಬಂದಿ ಸೇರಿ ಒಟ್ಟು ಐವರು ದುರಂತದಲ್ಲಿ ಮೃತಪಟ್ಟಿದ್ದಾರೆ.
‘ಕೆಲಸ ಮುಗಿದ ನಂತರ ನಾಳೆ ನಿಮ್ಮೊಂದಿಗೆ ಖಂಡಿತ ಮಾತನಾಡುತ್ತೇನೆ ಎಂದು ಮಗಳು ಭರವಸೆ ನಿಡಿದ್ದಳು. ಆದರೆ, ಆ ಕ್ಷಣ ಇನ್ನೆಂದಿಗೂ ಬರುವುದಿಲ್ಲ’ ಎಂದು ಶಿವಕುಮಾರ್ ನೋವಿನಿಂದ ನುಡಿದರು.
ಶಿವಕುಮಾರ್ ಸಹ ಎನ್ಸಿಪಿ– ಎಸ್ಪಿ ಬಣದ ಕಾರ್ಯಕರ್ತರು. ‘ಸ್ಥಳೀಯ ಮುಖಂಡರಾದ ಸಮಾಧಾನ್ ಸಾರ್ವಂಕರ್ ಅವರು, ಅಜಿತ್ ಪವಾರ್ ಅವರ ವಿಮಾನ ಪತನಗೊಂಡಿರುವುದನ್ನು ಫೋನ್ ಮೂಲಕ ನನ್ನ ಗಮನಕ್ಕೆ ತಂದರು’ ಎಂದು ಅವರು ಹೇಳಿದರು.
ಪಿಂಕಿ ಮಾಲಿ ಐದು ವರ್ಷಗಳಿಂದ ಫ್ಲೈಟ್ ಅಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆರಂಭದಲ್ಲಿ ಏರ್ ಇಂಡಿಯಾದಲ್ಲಿದ್ದ ಅವರು ನಂತರ, ಖಾಸಗಿ ವಿಶೇಷ ವಿಮಾನಗಳಲ್ಲಿ ಸಹಾಯಕಿ ಆಗಿ ಸೇರಿದ್ದರು. ಜನವರಿ 16ರಂದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತ ಚಲಾಯಿಸಲು ಮುಂಬೈಗೆ ಬಂದಿದ್ದಾಗ ಪಿಂಕಿ, ತಂದೆಯನ್ನು ಕೊನೆಯ ಬಾರಿ ಭೇಟಿಯಾಗಿದ್ದರು.