ಬೈಂದೂರು ಎಪ್ರಿಲ್ 28: ಕಳೆದ ಬಾರಿ ಶೇ. 35ರಷ್ಟು ಫಲಿತಾಂಶ ಪಡೆದಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದ ಅದೇ ಶಾಸಕರು, ಈ ಬಾರಿ ಶೇ. 94ರಷ್ಟು ಫಲಿತಾಂಶ ಬಂದಿದ್ದನ್ನು ಕಂಡು ಭಾವುಕರಾಗಿ ಸರಕಾರಿ ಶಾಲೆಯ ಶಿಕ್ಷಕಿಯ ಕಾಲಿಗೆ ಬಿದ್ದು ನಮಸ್ಕರಿಸಿದ ಅಪರೂಪದ ಘಟನೆ ಶಿರೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ.

ಕಳೆದ ವರ್ಷ ಎಸ್ಎಸ್ಎಲ್ಸಿ ಫಲಿತಾಂಶ ಕುಸಿದಿದ್ದ ಹಿನ್ನೆಲೆಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಪ್ರಾಂಶುಪಾಲೆ ಜಯಂತಿ ಮತ್ತು ಶಿಕ್ಷಕ ತಂಡವನ್ನು ಕಟು ಮಾತುಗಳಿಂದ ಎಚ್ಚರಿಸಿದ್ದರು. ಶಾಸಕರ ಈ ಟೀಕೆಯನ್ನು ಸವಾಲಾಗಿ ಸ್ವೀಕರಿಸಿದ್ದ ಶಿಕ್ಷಕ ವೃಂದ, ಈ ಬಾರಿ ಶಾಲೆಗೆ ಶೇ. 94ರಷ್ಟು ಫಲಿತಾಂಶ ತಂದುಕೊಡುವಲ್ಲಿ ಯಶಸ್ವಿಯಾಗಿದೆ.
ಶನಿವಾರ ಶಾಲೆಗೆ ಭೇಟಿ ನೀಡಿದ ಶಾಸಕರು, ಶಾಲೆಯ ಪ್ರಗತಿಯನ್ನು ಕಂಡು ಆನಂದಬಾಷ್ಪ ಸುರಿಸಿದರು. ಪ್ರಾಂಶುಪಾಲೆ ಜಯಂತಿ ಅವರ ಕಾಲಿಗೆ ನಮಸ್ಕರಿಸಿದ ಶಾಸಕರು, “ಸೋತಾಗ ಎಚ್ಚರಿಸುವ ಕೆಲಸ ಅನಿವಾರ್ಯವಾಗಿತ್ತು. ನನ್ನ ಟೀಕೆಯನ್ನು ಪಾಸಿಟಿವ್ ಆಗಿ ಪಡೆದು ಈ ಸಾಧನೆ ಮಾಡಿದ ಜಯಂತಿ ಟೀಚರ್ ಮತ್ತು ತಂಡಕ್ಕೆ ನನ್ನ ಅಭಿನಂದನೆಗಳು,” ಎಂದರು. ಶಾಸಕರ ಈ ಪ್ರೀತಿಯ ಗೌರವಕ್ಕೆ ಶಿಕ್ಷಕರು ಮತ್ತು ಪೋಷಕರು ಸಾಕ್ಷಿಯಾದರು.