ಬೈಂದೂರು ಸೆಪ್ಟೆಂಬರ್ 14: ಕುಡಿದ ನಶೆಯಲ್ಲಿ ನಡೆದ ಸ್ನೇಹಿತರ ಗಲಾಟೆಯಲ್ಲಿ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಬೈಂದೂರಿನಲ್ಲಿ ನಡೆದಿದೆ. ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆ ಎಂಬಲ್ಲಿ ಘಟನೆ ಸಂಭವಿಸಿದೆ. ಬಿನು (45) ಕೊಲೆಯಾದ ವ್ಯಕ್ತಿ. ಉದಯ (43) ಕೊಲೆಗೈದ ಆರೋಪಿ.


ಕೇರಳದಿಂದ ಕೆಲಸ ಅರಸುತ್ತ ಜತೆಯಾಗಿ ಬಂದಿದ್ದ ಸ್ನೇಹಿತರಾದ ಬಿನು ಮತ್ತು ಉದಯ ಕಳೆದ ಎರಡು ವರ್ಷಗಳಿಂದ ಕೊಸಳ್ಳಿಯ ಥಾಮಸ್‌ ಕುಟ್ಟಿ ಅವರ ತೋಟದಲ್ಲಿ ರಬ್ಬರ್‌ ಟ್ಯಾಪಿಂಗ್‌ ಕೆಲಸ ಮಾಡುತ್ತ ತೋಟದ ಮನೆಯಲ್ಲಿ ಉಳಿದುಕೊಂಡಿದ್ದರು. ಹೆಚ್ಚಿನ ದಿನಗಳಲ್ಲಿ ಮದ್ಯ ಸೇವನೆಯ ಬಳಿಕ ಜಗಳ ಮಾಡಿಕೊಳ್ಳುತ್ತಿದ್ದರು. ಆದರೆ ಶನಿವಾರ ಮಧ್ಯರಾತ್ರಿ ಒಂದು ಗಂಟೆ ಹೊತ್ತಿಗೆ ಇಬ್ಬರ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಉದಯನು ರಬ್ಬರ್‌ ಟ್ಯಾಪಿಂಗ್‌ ಮಾಡುವ ಕತ್ತಿಯಿಂದ ಬಿನು ಅವರಿಗೆ ಚುಚ್ಚಿದನು. ಗಂಭೀರ ಗಾಯಗೊಂಡ ಬಿನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಆರೋಪಿ ಉದಯ

ಕೊಲೆ ಮಾಡಿದ ಬಳಿಕ ಉದಯ್ ಅಲ್ಲಿಂದ ಓಡಿ ಪರಾರಿಯಾಗಿದ್ದನು. ಈ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಮತ್ತು ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information