ಕಾಪು, ಜನವರಿ 30: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಅವರ ಮನೆಗೆ ಗುರುವಾರ ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗದನ್ನು ದೋಚಿದ್ದಾರೆ.

ದಿವಾಕರ್ ಶೆಟ್ಟಿ ಮುಂಬೈನಲ್ಲಿ ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಅವರ ಮನೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಪುರಸಭೆ ಸದಸ್ಯ ಸುರೇಶ್ ಶೇರಿಗಾರ್ ಅವರಿಗೆ ವಹಿಸಿದ್ದರು. ಸುರೇಶ್ ಶೇರಿಗಾರ್ ಮನೆಯ ಮೇಲಿನ ಮಹಡಿಯಲ್ಲಿ ಮಲಗಿದ್ದಾಗ ಈ ಕಳ್ಳತನ ನಡೆದಿದೆ. ಮುಸುಕು ಧರಿಸಿದ ದುಷ್ಕರ್ಮಿಗಳು ಬಾಗಿಲು ಒಡೆದು ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.

ಮುಖ್ಯ ದ್ವಾರದ ದಾರಂದ ಮುರಿದು ಒಳ ನುಗ್ಗಿದ ಕಳ್ಳರು, ಮನೆಯನ್ನು ಜಾಲಾಡಿದ್ದಾರೆ. ಸಿಸಿ ಕೆಮೆರಾದ ದಿಕ್ಕನ್ನು ಬದಲಿಸಿರುವ ಕಳ್ಳರು ಡಿವಿಆರ್ ಕೊಂಡೊಯ್ದಿದ್ದಾರೆ. ಮಾಹಿತಿ ಪಡೆದ ಕೂಡಲೇ ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.