ಬ್ರಹ್ಮಾವರ ಎಪ್ರಿಲ್ 04: ಹೇರಾಡಿ ಗ್ರಾಮದ ಮನೆಯೊಂದರ ಬೀಗ ಒಡೆದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಬಾರಕೂರು ನಿವಾಸಿ ಪ್ರವೀಣ್ ಕುಮಾರ್ ಕೆ (ಪ್ರವೀಣ್) ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 14 ಲಕ್ಷ ರೂ. ಮೌಲ್ಯದ ಚಿನ್ನದ ಆಭರಣ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್ 6ರಂದು ಹೇರಾಡಿ ಗ್ರಾಮದ ಐಟಿಐ ಕಾಲೇಜು ಸಮೀಪದ ಮಂಜುನಾಥ್ ರಾವ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯವರು ಬಾರಕೂರಿನಲ್ಲಿ ನಡೆಯುತ್ತಿದ್ದ ನಾಗಮಂಡಲ ಕಾರ್ಯಕ್ರಮಕ್ಕೆ ತೆರಳಿದ್ದ ಸಮಯವನ್ನು ಹೊಂಚು ಹಾಕಿದ್ದ ಕಳ್ಳರು, ಮುಂಭಾಗದ ಬಾಗಿಲು ಒಡೆದು ಒಳನುಗ್ಗಿದ್ದರು. ಬೆಡ್ರೂಮ್ನಲ್ಲಿದ್ದ ಕಪಾಟಿನ ಬೀಗ ಮುರಿದು 47 ಗ್ರಾಂನ ಮುತ್ತಿನ ಸರ, 32 ಗ್ರಾಂನ ಬಳೆಗಳು ಸೇರಿದಂತೆ ಒಟ್ಟು 14,67,000 ರೂ. ಮೌಲ್ಯದ ಸ್ವತ್ತನ್ನು ದೋಚಲಾಗಿತ್ತು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಪ್ರವೀಣ್ನನ್ನು ಸೆರೆಹಿಡಿದಿದ್ದಾರೆ. ಈತನಿಂದ ಕಳವು ಮಾಡಲಾಗಿದ್ದ ಚಿನ್ನದ ಬೆಂಡೋಲೆ, ಉಂಗುರ, ಬೆಳ್ಳಿಯ ಹರಿವಾಣ ಹಾಗೂ 7,500 ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.