ಬ್ರಹ್ಮಾವರ ಮೇ 05: ಬೆಂಗಳೂರಿನಿಂದ ಚೇರ್ಕಾಡಿಗೆ ಗೆಳೆಯನನ್ನು ಭೇಟಿ ಮಾಡಲು ಬಂದಿದ್ದ ನೇಪಾಳ ಮೂಲದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ, ಚಿಕಿತ್ಸೆ ಫಲಿಸದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಮದನ್ ಕುಮಾರ್ ನೇಪಾಳ್ ಎಂದು ಗುರುತಿಸಲಾಗಿದೆ.

ಏಪ್ರಿಲ್ 29ರಂದು ರಾತ್ರಿ 11:45ರ ಸುಮಾರಿಗೆ ಮದನ್ ಕುಮಾರ್ ಅವರು ಬ್ರಹ್ಮಾವರದ ಕೃಷಿ ಕೇಂದ್ರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೇತ್ರಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಬಂದ ವಾಹನವೊಂದು ಇವರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ. ಗಾಯಗೊಂಡಿದ್ದ ಇವರನ್ನು ಸ್ಥಳೀಯರು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು.
ಮೇ 2ರಂದು ಮೃತರ ಅಣ್ಣ ನರೇಶ್ ಕುಮಾರ್ ಅವರು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಮೇ 3ರಂದು ಬೆಳಿಗ್ಗೆ 10:15ಕ್ಕೆ ಚಿಕಿತ್ಸೆಗೆ ಸ್ಪಂದಿಸದೆ ಮದನ್ ಕುಮಾರ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನರೇಂದ್ರ ದಮಾಯ್ ಎಂಬುವವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 81/2026ರಡಿ ಪ್ರಕರಣ ದಾಖಲಾಗಿದೆ.