ತಿರುವನಂತಪುರಂ, ಮೇ 04: ಕೇರಳದಲ್ಲಿ ಬಿಜೆಪಿ ಈಗ ಕೇವಲ ‘ವೋಟ್ ಕಟ್’ ಮಾಡುವ ಪಕ್ಷವಾಗಿ ಉಳಿಯದೆ, ನೇರ ಸ್ಪರ್ಧೆ ನೀಡಿ ಗೆಲ್ಲುವ ಹಂತಕ್ಕೆ ತಲುಪಿದೆ. ಪ್ರಮುಖ ನಾಯಕರ ವರ್ಚಸ್ಸು ಮತ್ತು ತಳಮಟ್ಟದ ಸಂಘಟನೆಯು ದಕ್ಷಿಣದ ಈ ರಾಜ್ಯದಲ್ಲಿ ಕಮಲ ಅರಳಲು ಕಾರಣವಾಗಿದೆ. ಇದು ಮುಂದಿನ ದಿನಗಳಲ್ಲಿ ರಾಜ್ಯದ ದ್ವಿಪಕ್ಷೀಯ ರಾಜಕಾರಣದ (LDF-UDF) ಸಮೀಕರಣವನ್ನು ಸಂಪೂರ್ಣವಾಗಿ ಬದಲಿಸುವ ಮುನ್ಸೂಚನೆಯನ್ನು ನೀಡಿದೆ.
ದೇವರ ನಾಡಿನಲ್ಲಿ ನೆಲೆ ಕಂಡುಕೊಳ್ಳಲು ದಶಕಗಳಿಂದ ಹೋರಾಡುತ್ತಿದ್ದ ಬಿಜೆಪಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಕೇರಳದ ಬಿಜೆಪಿ ರಾಜ್ಯಾಧ್ಯಕ್ಷರಾದ ರಾಜೀವ್ ಚಂದ್ರಶೇಖರ್ ನೇಮಮ್ ಕ್ಷೇತ್ರದಲ್ಲಿ ಬಿ. ಬಿ. ಗೋಪಕುಮಾರ್ ಚಾತನ್ನೂರಿನಲ್ಲಿ ಜಯಗಳಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಮುರಳೀಧರನ್ ಅವರು ಕಲಕುಟ್ಟಂದಿಂದ ವಿಜಯ ಸಾಧಿಸಿದ್ದಾರೆ.
ಇದು ಕೇರಳದ ರಾಜಕೀಯ ಇತಿಹಾಸದಲ್ಲಿ ಬಿಜೆಪಿಯ ಅತ್ಯಂತ ಯಶಸ್ವಿ ವಿಧಾನಸಭಾ ಚುನಾವಣೆಯಾಗಿದೆ. ಕೇರಳದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ತಳಮಟ್ಟದಿಂದ ಬಹಳ ಪ್ರಯತ್ನ ನಡೆಸುತ್ತಿದೆ. 2016ರಲ್ಲಿ ಓ. ರಾಜಗೋಪಾಲ್ ಅವರು ನೇಮಮ್ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಬಿಜೆಪಿ ಮೊದಲ ಬಾರಿಗೆ ಕೇರಳ ವಿಧಾನಸಭೆ ಪ್ರವೇಶಿಸಿತ್ತು. ಆದರೆ 2021ರ ಚುನಾವಣೆಯಲ್ಲಿ ಪಕ್ಷವು ಯಾವುದೇ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ.
2024ರ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಗೋಪಿ ಅವರು ತ್ರಿಶೂರ್ನಿಂದ ಗೆಲ್ಲುವ ಮೂಲಕ ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ಸೃಷ್ಟಿಸಿದ್ದರು.ಇತ್ತೀಚೆಗೆ ನಡೆದ ತಿರುವನಂತಪುರಂ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 101 ವಾರ್ಡ್ಗಳ ಪೈಕಿ 50 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರಕ್ಕೆ ಏರಿತ್ತು.
ಕೇರಳದ ಸಾಂಪ್ರದಾಯಿಕ ಎಲ್ಡಿಎಫ್ ಮತ್ತು ಯುಡಿಎಫ್ ರಾಜಕಾರಣದ ನಡುವೆ ಬಿಜೆಪಿ ಈಗ ಬಲವಾದ ‘ಮೂರನೇ ಶಕ್ತಿ’ಯಾಗಿ ಉದಯಿಸಿದೆ. ತಳಮಟ್ಟದ ಸಂಘಟನೆ ಮತ್ತು ಪ್ರಮುಖ ನಾಯಕರ ವರ್ಚಸ್ಸು ದಕ್ಷಿಣದ ಈ ರಾಜ್ಯದಲ್ಲಿ ಕಮಲ ಅರಳುವಂತೆ ಮಾಡಿದೆ. ಇದು ಮುಂದಿನ ದಿನಗಳಲ್ಲಿ ಕೇರಳ ರಾಜಕಾರಣದ ದಿಕ್ಕನ್ನೇ ಬದಲಿಸುವ ಮುನ್ಸೂಚನೆಯಾಗಿದೆ.