ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಖ್ಯಾತಿಯ ನಟಿ ರಿಷಾ ಗೌಡ, ಬೆಂಗಳೂರಿನ ವಿಮಾನ ನಿಲ್ದಾಣದ ಬಸ್ಸಿನಲ್ಲಿ ತಮಗೆ ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡುವ ಮೂಲಕ ತಕ್ಕ ಶಾಸ್ತಿ ಮಾಡಿದ್ದಾರೆ.

ತಮ್ಮ ಇತ್ತೀಚಿನ ಸಿನಿಮಾದ ಪ್ರಚಾರದ ಸಂದರ್ಶನವೊಂದರಲ್ಲಿ ಈ ಆಘಾತಕಾರಿ ಘಟನೆಯನ್ನು ನೆನಪಿಸಿಕೊಂಡಿರುವ ನಟಿ, ಬೆಂಗಳೂರಿನ ‘ವಾಯು ವಜ್ರ’ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಪ್ರಸಂಗ ನಡೆದಿದೆ ಎಂದು ತಿಳಿಸಿದ್ದಾರೆ. ಜೀನ್ಸ್ ಮತ್ತು ಟಾಪ್ ಧರಿಸಿದ್ದ ನಟಿಯ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ, ಪದೇ ಪದೇ ಅಸಭ್ಯವಾಗಿ ಮುಟ್ಟುತ್ತಾ ವಿಕೃತ ಚೇಷ್ಟೆ ನಡೆಸಿದ್ದಾನೆ. ಆರಂಭದಲ್ಲಿ ಇದನ್ನು ಆಕಸ್ಮಿಕ ಎಂದು ನಿರ್ಲಕ್ಷಿಸಿದರೂ, ಆತನ ವರ್ತನೆ ಅತಿರೇಕಕ್ಕೆ ಹೋದಾಗ ತಕ್ಷಣವೇ ಎದ್ದು ನಿಂತ ನಟಿ, ಆತನ ಕೆನ್ನೆಗೆ ಬಾರಿಸುವ ಮೂಲಕ ಸ್ಥಳದಲ್ಲೇ ಪ್ರತಿರೋಧ ಒಡ್ಡಿದ್ದಾರೆ.
ಈ ಘಟನೆಯ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿರುವ ಅವರು, ಸಮಾಜದ ಮೌನ ಮತ್ತು ವಿಕೃತ ಮನಸ್ಥಿತಿಯ ಬಗ್ಗೆ ಚಾಟಿ ಬೀಸಿದ್ದಾರೆ. “ನಾನು ಆತನಿಗೆ ಹೊಡೆಯುತ್ತಿದ್ದರೂ ಬಸ್ಸಿನಲ್ಲಿದ್ದ ಇತರ ಪುರುಷ ಪ್ರಯಾಣಿಕರು ಕಲ್ಲಂತೆ ಕುಳಿತಿದ್ದರು, ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಆದರೆ ಬಸ್ ನಿರ್ವಾಹಕರು ಮಾತ್ರ ತಕ್ಷಣವೇ ನನ್ನ ಬೆಂಬಲಕ್ಕೆ ಧಾವಿಸಿ ನೆರವು ನೀಡಿದರು” ಎಂದು ಆ ಕ್ಷಣದ ಕಹಿ ನೆನಪನ್ನು ಹಂಚಿಕೊಂಡಿದ್ದಾರೆ.
ಕಿರುಕುಳಕ್ಕೂ ಮಹಿಳೆಯರ ಉಡುಗೆಗೂ ಸಂಬಂಧ ಕಲ್ಪಿಸುವ ಸಮಾಜದ ಧೋರಣೆಯನ್ನು ಖಂಡಿಸಿರುವ ರಿಷಾ, “ಹೆಣ್ಣುಮಕ್ಕಳು ಸೀರೆ ಉಟ್ಟರೂ ಇಂತಹ ವಿಕೃತ ಮನಸ್ಥಿತಿಯವರು ಬಿಡುವುದಿಲ್ಲ. ಇದು ಕೇವಲ ನೋಡುಗರ ದೃಷ್ಟಿಕೋನದಲ್ಲಿದೆ. ದುಬೈನಂತಹ ದೇಶಗಳಲ್ಲಿ ಮಧ್ಯರಾತ್ರಿಯೂ ಮಹಿಳೆಯರು ಸುರಕ್ಷಿತವಾಗಿದ್ದಾರೆ, ಆದರೆ ನಮ್ಮಲ್ಲಿ ರಾತ್ರಿ 9 ಗಂಟೆಯ ನಂತರವೂ ಓಡಾಡುವುದು ಕಷ್ಟಕರವಾಗಿದೆ” ಎಂದು ಮಹಿಳಾ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ರಿಷಾ ಗೌಡ ಅವರ ಈ ಧೈರ್ಯದ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಿರುಕುಳದಂತಹ ಸಂದರ್ಭಗಳಲ್ಲಿ ಮಹಿಳೆಯರು ಮೌನವಾಗಿರುವುದಕ್ಕಿಂತ ಪ್ರತಿರೋಧ ಒಡ್ಡುವುದು ಮತ್ತು ಸಾರ್ವಜನಿಕರು ಸಂತ್ರಸ್ತೆಯ ಪರವಾಗಿ ನಿಲ್ಲುವುದು ಎಷ್ಟು ಅಗತ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.