ಬಿಗ್ ಬಾಸ್ ಕನ್ನಡ ಸೀಸನ್ 12ರ (BBK 12) ರನ್ನರ್- ಅಪ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ರಕ್ಷಿತಾ ಶೆಟ್ಟಿ, ಇತ್ತೀಚೆಗೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ತಮ್ಮ ಮದುವೆ ಹಾಗೂ ಭಾವಿ ಪತಿಯ ಬಗ್ಗೆ ಇರುವ ಕನಸುಗಳನ್ನು ಹಂಚಿಕೊಂಡಿದ್ದಾರೆ. ಗ್ಲಾಮರ್ ಲೋಕದ ಮಿಂಚಿನ ನಡುವೆಯೂ ಅವರು ಬಯಸಿರುವ ಸರಳ ಬದುಕಿಗೆ ಅಭಿಮಾನಿಗಳು ಮಾರುಹೋಗಿದ್ದಾರೆ.

ಸಂದರ್ಶನದ ವೇಳೆ ನಿರೂಪಕಿ, “ನಿಮ್ಮನ್ನು ಮದುವೆಯಾಗುವ ಹುಡುಗನಿಗೆ ಇರಬೇಕಾದ ಗುಣಗಳೇನು?” ಎಂದು ಕೇಳಿದ ಪ್ರಶ್ನೆಗೆ ರಕ್ಷಿತಾ ಅತ್ಯಂತ ಕುತೂಹಲಕಾರಿ ಉತ್ತರ ನೀಡಿದ್ದಾರೆ. “ನನ್ನನ್ನು ಮದುವೆಯಾಗುವವನಿಗೆ ನಾಲ್ಕು ಗದ್ದೆ ಇರಬೇಕು, ಹಂಚಿನ ಮನೆಯಿರಬೇಕು, ಕೋಳಿ ಗೂಡು ಹಾಗೂ ದನದ ಕೊಟ್ಟಿಗೆ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆ ಮನೆಯಲ್ಲಿ ಒಬ್ಬರು ಅಜ್ಜಿ ಇರಬೇಕು,” ಎಂದು ತಮ್ಮ ಮನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ಕೇಳಿದ ನಿರೂಪಕಿ, “ಅಂದರೆ ನಿಮಗೆ ‘ಮಲ್ಲಮ್ಮ’ನ ತರಹದ ಅಜ್ಜಿ ಬೇಕೆ?” ಎಂದು ಕೇಳಿದಾಗ, ರಕ್ಷಿತಾ ಅವರು ನಗುತ್ತಲೇ “ಹೌದು” ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ರಕ್ಷಿತಾ ಶೆಟ್ಟಿ ಅವರು ತಮ್ಮ ಕನ್ನಡ ಭಾಷಾ ಪ್ರೇಮವನ್ನೂ ಮೆರೆದಿದ್ದಾರೆ. ಅವರಿಗೆ ಕನ್ನಡ ಭಾಷೆ ತಿಳಿದಿದ್ದರೂ ಸರಿಯಾಗಿ ಬಾರದಂತೆ ನಾಟಕ ಮಾಡುತ್ತಾರೆ ಎಂಬ ಟೀಕೆಗಳಿಗೆ ಅವರು ತಮ್ಮ ನಡೆಯ ಮೂಲಕವೇ ಉತ್ತರ ನೀಡಿದ್ದಾರೆ. ಸಂದರ್ಶನದ ವೇಳೆ ತಮಗೆ ತಿಳಿಯದ ಕೆಲವು ಕನ್ನಡ ಪದಗಳನ್ನು ಅಲ್ಲೇ ಇದ್ದ ತುಳು ಮೂಲದ ಸಿಬ್ಬಂದಿಯ ಬಳಿ ಕೇಳಿ ತಿಳಿದುಕೊಂಡು, ಸರಿಯಾದ ಪದಗಳನ್ನು ಬಳಸಿ ಉತ್ತರಿಸುವ ಮೂಲಕ ಭಾಷೆಯ ಮೇಲಿರುವ ಗೌರವವನ್ನು ಸಾಬೀತುಪಡಿಸಿದ್ದಾರೆ. ಬಣ್ಣದ ಲೋಕದಲ್ಲಿದ್ದರೂ ಹಳ್ಳಿಯ ಸೊಗಡು ಮತ್ತು ಸಂಪ್ರದಾಯದ ಬಗ್ಗೆ ರಕ್ಷಿತಾ ಅವರಿಗಿರುವ ಈ ಒಲವು ಅವರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.