ಬೆಂಗಳೂರು ಜೂನ್ 24: ಲಿವ್-ಇನ್ ರಿಲೇಷನ್ಶಿಪ್ಗೆ ಅಡ್ಡಿಯಾಗಿದ್ದರೆಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಹೆತ್ತ ತಂದೆ, ತಾಯಿ ಹಾಗೂ ತಂಗಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದ ಟೆಕ್ಕಿ ಯುವತಿಯನ್ನು ವೈಟ್ಫೀಲ್ಡ್ ವಿಭಾಗದ ಪೊಲೀಸರು ಪುದುಚೇರಿ ರೈಲ್ವೇ ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಶ್ವೇತಾ (25) ಎಂದು ಗುರುತಿಸಲಾಗಿದೆ. ಈಕೆಯ ಪ್ರಿಯಕರ, ಕೊಲೆಯ ಮತ್ತೊಬ್ಬ ಆರೋಪಿ ಕೆನತ್ ಪತ್ತೆಗಾಗಿ ಪೊಲೀಸರು ತೀವ್ರ ಜಾಲ ಬೀಸಿದ್ದಾರೆ. ಸೀಗೇಹಳ್ಳಿಯ ಡಾಮಿನಿಕ್ ಲೇಔಟ್ನಲ್ಲಿರುವ ‘ಸಾಯಿ ಗ್ರೀನ್ ಹೋಮ್ಸ್’ ಅಪಾರ್ಟ್ಮೆಂಟ್ನಲ್ಲಿ ಸೋಮವಾರ ರಾತ್ರಿ ಸೋಮಸುಂದರ್ (52), ಅವರ ಪತ್ನಿ ಮುತ್ತುಲಕ್ಷ್ಮಿ (48) ಮತ್ತು ಕಿರಿಯ ಪುತ್ರಿ ಸುಪ್ರಿಯಾ (19) ಎಂಬುವವರ ಹತ್ಯೆ ನಡೆದಿತ್ತು.

ಪೊಲೀಸ್ ಮೂಲಗಳ ಪ್ರಕಾರ, ಶ್ವೇತಾ ಹಾಗೂ ಕೆನತ್ ನ್ಯೂ ಹಾರಿಜನ್ ಕಾಲೇಜಿನಲ್ಲಿ ಒಟ್ಟಿಗೆ ಬಿ.ಟೆಕ್ ಮುಗಿಸಿ, ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ಗಳಾಗಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದರು. ಇವರಿಬ್ಬರು ಕಳೆದ ಎರಡು ತಿಂಗಳಿನಿಂದ ಸಾಯಿ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದರು. ಆರಂಭದಲ್ಲಿ ಈ ವಿಷಯವನ್ನು ಶ್ವೇತಾ ಮುಚ್ಚಿಟ್ಟಿದ್ದರೂ, ಇತ್ತೀಚೆಗೆ ಪೋಷಕರಿಗೆ ತಾನಿರುವ ಜಾಗದ ಮಾಹಿತಿ ನೀಡಿದ್ದಳು. ಮಗಳ ಸಹಜೀವನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಪೋಷಕರು ಬುದ್ಧಿವಾದ ಹೇಳಲು ಸೋಮವಾರ ಸಂಜೆ ಆಕೆಯ ಅಪಾರ್ಟ್ಮೆಂಟ್ಗೆ ಬಂದಿದ್ದರು. ಈ ವೇಳೆ ನಡೆದ ತೀವ್ರ ಜಗಳದ ನಡುವೆ ಶ್ವೇತಾ ಮತ್ತು ಕೆನತ್ ಸೇರಿ ಮುತ್ತುಲಕ್ಷ್ಮಿ ಹಾಗೂ ಸುಪ್ರಿಯಾಳನ್ನು ಚಾಕುವಿನಿಂದ ಇರಿದು ಸ್ಥಳದಲ್ಲೇ ಕೊಂದಿದ್ದಾರೆ. ತೀವ್ರ ಗಾಯಗಳೊಂದಿಗೆ ತಪ್ಪಿಸಿಕೊಂಡು ಹೊರಬಂದ ತಂದೆ ಸೋಮಸುಂದರ್ ಅವರು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಹತ್ಯೆ ನಡೆದ ಮನೆಯನ್ನು ಶೋಧಿಸಿದ ಪೊಲೀಸರಿಗೆ ಶ್ವೇತಾ ಬರೆಯುತ್ತಿದ್ದ ವೈಯಕ್ತಿಕ ಡೈರಿ ಸಿಕ್ಕಿದೆ. ಅದರಲ್ಲಿ ಆಕೆ “ಐ ಆ್ಯಮ್ ಸ್ಯಾಡ್, ಐ ಆ್ಯಮ್ ಲೋನ್ಲಿ, ಫೀಲಿಂಗ್ ಲವ್ಡ್, ಐ ಆ್ಯಮ್ ಡಿಪ್ರೆಸ್ಡ್, ಐ ಆ್ಯಮ್ ಸೂಪಿರಿಯರ್” (ನಾನು ದುಃಖದಲ್ಲಿದ್ದೇನೆ, ಒಬ್ಬಂಟಿಯಾಗಿದ್ದೇನೆ, ಡಿಪ್ರೆಷನ್ನಲ್ಲಿದ್ದೇನೆ, ನಾನೇ ಶ್ರೇಷ್ಠ) ಎಂದು ಬರೆದುಕೊಂಡಿರುವುದು ಪತ್ತೆಯಾಗಿದೆ. ಬಂಧನದ ಬಳಿಕ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಶ್ವೇತಾ ಪೊಲೀಸರ ಮುಂದೆ ಆಘಾತಕಾರಿ ಸತ್ಯ ಬಿಚ್ಚಿಟ್ಟಿದ್ದಾಳೆ. “ನನ್ನ ಪೋಷಕರು ನನ್ನ ಜೀವನವನ್ನೇ ಕಂಟ್ರೋಲ್ ಮಾಡುತ್ತಿದ್ದರು. ನನಗೆ ಯಾವುದೇ ಸ್ವಾತಂತ್ರ್ಯ ಕೊಟ್ಟಿರಲಿಲ್ಲ. ಆ ಕೋಪದಲ್ಲೇ ನಾನೇ ಈ ಹತ್ಯೆ ಮಾಡಿದೆ” ಎಂದು ಒಪ್ಪಿಕೊಂಡಿದ್ದಾಳೆ. ಕೃತ್ಯದ ಬಳಿಕ ಇಬ್ಬರೂ ಪರಾರಿಯಾಗಿ ಮಾರ್ಗಮಧ್ಯೆ ಪ್ರತ್ಯೇಕವಾಗಿದ್ದರು. ಸದ್ಯ ಶ್ವೇತಾ ಪೊಲೀಸ್ ಕಸ್ಟಡಿಯಲ್ಲಿದ್ದು, ತಲೆಮರೆಸಿಕೊಂಡಿರುವ ಕೆನತ್ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.