ಬೆಂಗಳೂರು: “ಕಳೆದ ಎಂಟು ವರ್ಷಗಳಲ್ಲಿ ಲಕ್ಷ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದೇವೆ ಎಂದು ₹120 ಕೋಟಿ ಬಿಲ್ ಎತ್ತಿದ್ದೀರಾ! ಆದರೂ ನಗರದಲ್ಲಿ ನಾಯಿಗಳ ಸಂಖ್ಯೆ ಕಡಿಮೆ ಆಗಿಲ್ಲ, ಜನರ ಪ್ರಾಣ ಹೋಗ್ತಿದೆ. ನಾನೇನು ಕಿವಿ ಮೇಲೆ ದಾಸವಾಳ ಹೂವು ಇಟ್ಟುಕೊಂಡಿದ್ದೀನಾ? ಇದು ಯಾವ ಜಾದು?” ಹೀಗೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಬೇಜವಾಬ್ದಾರಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಗತ್ಯ ಅಂಕಿ-ಅಂಶ ಮತ್ತು ಕನಿಷ್ಠ ದಾಖಲೆಗಳೂ ಇಲ್ಲದೆ ಬರಿಗೈಲಿ ಸಭೆಗೆ ಬಂದಿದ್ದ ಪಶುಸಂಗೋಪನಾ ಇಲಾಖೆಯ ಅಧಿಕಾರಿಯನ್ನು ಸ್ಥಳದಲ್ಲೇ ಜಿಬಿಎ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ (ಸೇವೆಯಿಂದ ವಜಾ) ಸಚಿವರು ಕಡಕ್ ಆದೇಶ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಪಶುಸಂಗೋಪನೆ ಇಲಾಖೆಯ 19 ಅಧಿಕಾರಿಗಳಿದ್ದರೂ ಒಬ್ಬರ ಬಳಿಯೂ ನಿಖರ ಮಾಹಿತಿ ಇಲ್ಲದಿರುವುದಕ್ಕೆ ಕೆಂಡಾಮಂಡಲರಾದರು. “ನಾಯಿಗಳ ಸಂತಾನಹರಣ ಪ್ರಕ್ರಿಯೆಯಲ್ಲಿ ಜಿಬಿಎ ಅಧಿಕಾರಿಗಳ ಭಾರಿ ಕಳ್ಳಾಟ ಅಡಗಿದೆ. ಕಳೆದ 8 ವರ್ಷಗಳಲ್ಲಿ ₹120 ಕೋಟಿ ರೂಪಾಯಿ ಖರ್ಚು ಮಾಡಿದ್ದರೂ ಬೀದಿ ನಾಯಿಗಳ ಕಾಟ ತಗ್ಗಿಲ್ಲ. ಹಾಗಾದರೆ ಈ ಕೋಟ್ಯಂತರ ರೂಪಾಯಿ ಹಣ ಎಲ್ಲಿ ಹೋಯಿತು? ಸಂತಾನಹರಣ ಮಾಡಿದ್ದು ನಾಯಿಗಳಿಗೋ ಅಥವಾ ಕಾಗದದ ಮೇಲೋ?” ಎಂದು ಆಕ್ರೋಶ ಹೊರಹಾಕಿದರು. ಈ ಸಮಸ್ಯೆಗೆ ಕಾನೂನಾತ್ಮಕವಾಗಿ ದೀರ್ಘಾವಧಿ ಪರಿಹಾರ ಕಂಡುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದೇ ವೇಳೆ ಸರ್ಕಾರ ಗಿಡ ನೆಡುವ ಯೋಜನೆಗೆ ಕೋಟ್ಯಂತರ ರೂಪಾಯಿ ಸುರಿಯುತ್ತಿದ್ದರೂ, ನೆಟ್ಟ ಗಿಡಗಳು ಕೆಲವು ತಿಂಗಳಲ್ಲೇ ಮಾಯವಾಗುತ್ತಿರುವ ಹಗರಣವನ್ನೂ ಸಚಿವರು ಪ್ರಸ್ತಾಪಿಸಿದರು. “ನಾವು ಬೆಂಗಳೂರಿನಲ್ಲಿ ಲಕ್ಷಾಂತರ ಗಿಡಗಳನ್ನು ನೆಡುತ್ತಿದ್ದೇವೆ. ಅದಕ್ಕಾಗಿ ಬೊಕ್ಕಸದಿಂದ ಕೋಟಿ ಕೋಟಿ ಹಣ ಖರ್ಚಾಗುತ್ತಿದೆ. ಆದರೆ, ಕೆಲವು ತಿಂಗಳ ಬಳಿಕ ನೋಡಿದರೆ ನೆಟ್ಟ ಜಾಗದಲ್ಲಿ ಒಂದು ಗಿಡವೂ ಇರಲ್ಲ. ಹಾಗಾದರೆ ಈ ಗಿಡಗಳೆಲ್ಲ ಎಲ್ಲಿಗೆ ಹೋದವು?” ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಈ ಎರಡೂ ಯೋಜನೆಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉನ್ನತ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.