ಬೆಂಗಳೂರು ನವೆಂಬರ್ 13: ಸ್ಕೂಟರ್ ನಲ್ಲಿದ್ದವರು ಹಾರ್ನ್ ಮಾಡಿದ್ದಾರೆ ಎಂಬ ಕಾರಣಕ್ಕೆ ಕಾರಿನಲ್ಲಿದ್ದ ಯುವಕನೊಬ್ಬ ಸ್ಕೂಟರ್ ನ್ನು ಪಾಲೋ ಮಾಡಿ ಅದಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಸಿಟಿವಿ ಆದಾರದ ಮೇಲೆ ಆರೋಪಿ ಕಾರಿನ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತನನ್ನು ಕೊಡಿಗೇಹಳ್ಳಿ ನಿವಾಸಿ ಸುಕೃತ್ ಗೌಡ ಎಂದು ಗುರುತಿಸಲಾಗಿದ್ದು, ಈತ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಅಂಕಿತಾ ಪಟೇಲ್ (31), ತಮ್ಮ ಪತಿ ವಿನೀತ್ ಎ (33) ಮತ್ತು ಅವರ ಮಗ ಗಾಯಗೊಂಡವರು. ದಂಪತಿ ಸದಾಶಿವನಗರ ಪೊಲೀಸ್ ಠಾಣೆ ಜಂಕ್ಷನ್ ಕಡೆಗೆ ತಮ್ಮ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ
ಸಿಗ್ನಲ್‌ನಲ್ಲಿ ನಿಂತಾಗ ಸ್ಕೂಟರ್‌ನಲ್ಲಿದ್ದ ದಂಪತಿ ಕಾರಿಗೆ ಹಾರ್ನ್‌ ಮಾಡಿದ್ದ ಹಿನ್ನೆಲೆ, ಸಿಟ್ಟಾದ ಯುವಕ ಅವರನ್ನು ಚೇಸ್‌ ಮಾಡಿ, ಎಂ.ಎಸ್. ರಾಮಯ್ಯ ಆಸ್ಪತ್ರೆಯ ಬಳಿ ದಂಪತಿ ಹಾಗೂ ಅವರ ಮಗು ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ಅತಿ ವೇಗವಾಗಿ ಬಂದು ಸುಕೃತ್ ಕಾರಿನಲ್ಲಿ ಬಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ.

ಡಿಕ್ಕಿಯ ರಭಸಕ್ಕೆ ಮೂವರೂ ಸ್ಕೂಟರ್‌ನಿಂದ ಕೆಳಗೆ ಬಿದ್ದಿದ್ದು, ಅಂಕಿತಾ ಮತ್ತು ವಿನೀತ್ ಗಾಯಗೊಂಡಿದ್ದರು. ಕೂಡಲೇ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ನಿರಂತರ ನೋವಿನಿಂದ ಬಳಲುತ್ತಿದ್ದ ವಿನೀತ್ ಅವರನ್ನು ನಂತರ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ದೂರಿನ ಆಧಾರದ ಮೇಲೆ, ಅಪಘಾತ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಕ್ಕಾಗಿ ಅಕ್ಟೋಬರ್ 28 ರಂದು ಅಪರಿಚಿತ ಕಾರು ಚಾಲಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿ ಸುಕೃತ್‌ನನ್ನು ಪತ್ತೆಹಚ್ಚಿ ನಂತರ ಆತನನ್ನು ಬಂಧಿಸಿದ್ದಾರೆ. ನವೆಂಬರ್ 6 ರಂದು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಕೊಲೆಯತ್ನ ಆರೋಪವನ್ನು ಸೇರಿಸಿ, ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸದಾಶಿವನಗರ ಪೊಲೀಸ್ ಠಾಣೆಗೆ ವರ್ಗಾಯಿಸಿದರು ಎನ್ನಲಾಗಿದೆ.

Share Information