ಬೆಂಗಳೂರು,ಮಾರ್ಚ್ 27: ಸ್ವಂತ ಬಾವನೇ ತನ್ನ ಬಾಮೈದನನ್ನು ಕಬ್ಬಿಣದ ರಾಡ್ನಿಂದ ಹೊಡೆದು ಮಣಿಸಿ, ಬಳಿಕ ಶವವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಬನ್ನೇರುಘಟ್ಟದ ಬಿಲ್ವಾರದಹಳ್ಳಿಯಲ್ಲಿ ನಡೆದಿದೆ.

ಮೃತ ಯುವಕನನ್ನು ರಂಜಿತ್ (24) ಎಂದು ಗುರುತಿಸಲಾಗಿದೆ. ಈತನ ಅಕ್ಕ ಪವಿತ್ರಾಳನ್ನು ಆರೋಪಿ ಶ್ರೀನಿವಾಸ್ ವಿವಾಹವಾಗಿದ್ದನು. ಆದರೆ, ಕುಟುಂಬಗಳ ನಡುವೆ ಬಿರುಕು ಮೂಡಿಸಿದ್ದು ಶ್ರೀನಿವಾಸ್ ತಂಗಿ ಕೋಮಲಾ ಹಾಗೂ ರಂಜಿತ್ ನಡುವಿನ ಸಂಬಂಧ. ಕೋಮಲಾಗೆ ಬೇರೊಬ್ಬರೊಂದಿಗೆ ಮದುವೆಯಾಗಿದ್ದರೂ, ಆಕೆ ತನ್ನ ಪತಿಯನ್ನು ತೊರೆದು ರಂಜಿತ್ ಜೊತೆ ಪರಾರಿಯಾಗಿದ್ದಳು. ಈ ವಿಷಯ ಶ್ರೀನಿವಾಸ್ನ ಕುಟುಂಬಕ್ಕೆ ತೀವ್ರ ಅವಮಾನ ತಂದೊಡ್ಡಿತ್ತು.
ಈ ಸಂಬಂಧದ ಕುರಿತು ಶ್ರೀನಿವಾಸ್ ಹಲವು ಬಾರಿ ರಂಜಿತ್ಗೆ ಎಚ್ಚರಿಕೆ ನೀಡಿದ್ದರೂ ಸಹ ಆತ ಕಿವಿಗೊಟ್ಟಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಶ್ರೀನಿವಾಸ್, ಗುರುವಾರ ಸಂಜೆ ಬಿಲ್ವಾರದಹಳ್ಳಿಯ ನಿರ್ಜನ ಪ್ರದೇಶಕ್ಕೆ ಮಾತುಕತೆಯ ನೆಪದಲ್ಲಿ ರಂಜಿತ್ನನ್ನು ಕರೆಸಿಕೊಂಡಿದ್ದಾನೆ. ಅಲ್ಲಿ ಮಾತಿಗೆ ಮಾತು ಬೆಳೆದು ಸಂಘರ್ಷ ಏರ್ಪಟ್ಟಾಗ, ಮೊದಲೇ ಸಿದ್ಧಪಡಿಸಿಕೊಂಡಿದ್ದ ಕಬ್ಬಿಣದ ರಾಡ್ನಿಂದ ಶ್ರೀನಿವಾಸ್ ರಂಜಿತ್ನ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ರಂಜಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೊಲೆಯ ನಂತರ ಕಿಂಚಿತ್ತೂ ಎದೆಗುಂದದ ಶ್ರೀನಿವಾಸ್, ರಕ್ತಸಿಕ್ತ ಶವವನ್ನು ತನ್ನ ಕಾರಿನ ಡಿಕ್ಕಿಯಲ್ಲಿ ತುರಿಸಿದ್ದಾನೆ. ಅಲ್ಲಿಂದ ನೇರವಾಗಿ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಕಾರು ಚಲಾಯಿಸಿಕೊಂಡು ಹೋಗಿ, ಪೊಲೀಸರ ಮುಂದೆ ನಿಂತು ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಕಾರಿನ ಡಿಕ್ಕಿ ತೆರೆದಾಗ ಶವ ಕಂಡು ಪೊಲೀಸರೇ ಒಂದು ಕ್ಷಣ ಆತಂಕಕ್ಕೊಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಮೋಹನ್ ಕುಮಾರ್ ಹಾಗೂ ಬನ್ನೇರುಘಟ್ಟ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಇನ್ಸ್ಪೆಕ್ಟರ್ ಕೃಷ್ಣಕುಮಾರ್, “ಸೋಕೋ (SOCO) ತಂಡದ ಮೂಲಕ ಸ್ಥಳದಿಂದ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಮೃತದೇಹದ ಜೊತೆಗೆ ಕೊಲೆಗೆ ಬಳಸಿದ ಕಬ್ಬಿಣದ ರಾಡ್ ಕೂಡ ಪತ್ತೆಯಾಗಿದೆ,” ಎಂದು ತಿಳಿಸಿದ್ದಾರೆ.
ಸದ್ಯ ಬನ್ನೇರುಘಟ್ಟ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶ್ರೀನಿವಾಸ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.