ಬೆಂಗಳೂರು, ಏಪ್ರಿಲ್ 25: ಅನೈತಿಕ ಸಂಬಂಧಕ್ಕೆ ಈರುಳ್ಳಿ ವ್ಯಾಪಾರಿ ಬರ್ಬರವಾಗಿ ಕೊಲೆಯಾದ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ತಮಿಳುನಾಡು ಮೂಲದ ರಾಮಚಂದ್ರ ರೆಡ್ಡಿ ಕೊಲೆಯಾದ ದುರ್ದೈವಿ. ಈತ ವೃತ್ತಿಯಲ್ಲಿ ಈರುಳ್ಳಿ ವ್ಯಾಪಾರಿಯಾಗಿದ್ದು, ವ್ಯಾಪಾರದ ಉದ್ದೇಶದಿಂದ ಆಗಾಗ ಬೆಂಗಳೂರಿಗೆ ಬರುತ್ತಿದ್ದನು. ಈ ಸಂದರ್ಭದಲ್ಲಿ ಕಾಡುಗೋಡಿ ವ್ಯಾಪ್ತಿಯ ಮಹಿಳೆಯೊಬ್ಬಳ ಪರಿಚಯವಾಗಿ, ಅದು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ರೆಡ್ಡಿ ನಗರಕ್ಕೆ ಬಂದಾಗೆಲ್ಲಾ ಆಕೆಯ ಮನೆಗೆ ಹೋಗಿ ಬರುತ್ತಿದ್ದನು ಎನ್ನಲಾಗಿದೆ. ಈ ನಡುವೆ, ಅದೇ ಮಹಿಳೆಗೆ ಹರೀಶ್ ಎಂಬಾತನ ಪರಿಚಯವಾಗಿ ಅವರಿಬ್ಬರ ನಡುವೆಯೂ ಪ್ರೇಮ ಸಂಬಂಧ ಬೆಳೆದಿತ್ತು. ಇತ್ತೀಚೆಗೆ ರಾಮಚಂದ್ರ ರೆಡ್ಡಿ ಮಹಿಳೆಯ ಮನೆಗೆ ಬಂದು ಹೋಗುತ್ತಿರುವುದು ಹರೀಶ್ಗೆ ತಿಳಿದಿತ್ತು. ಈ ಸಂಬಂಧವನ್ನು ಕಡಿದುಕೊಳ್ಳುವಂತೆ ಎಚ್ಚರಿಸಿದ್ದರೂ ರೆಡ್ಡಿ ಕೇಳಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಹರೀಶ್, ರಾಮಚಂದ್ರ ರೆಡ್ಡಿಯ ಹತ್ಯೆಗೆ ಸಂಚು ರೂಪಿಸಿದ್ದನು.
ಯಥಾಪ್ರಕಾರ ಏಪ್ರಿಲ್ 25ರಂದು ರಾಮಚಂದ್ರ ರೆಡ್ಡಿ ಮಹಿಳೆಯ ಮನೆಗೆ ಬಂದಿದ್ದನು. ಬಳಿಕ ಅಲ್ಲಿಯೇ ಸಮೀಪವಿದ್ದ ದೇವಸ್ಥಾನವೊಂದರ ಆವರಣದಲ್ಲಿ ಮಲಗಿದ್ದನು. ಇದೇ ಸಮಯಕ್ಕೆ ಕಾದು ಕುಳಿತಿದ್ದ ಹರೀಶ್, ಮಲಗಿದ್ದ ರೆಡ್ಡಿಯ ತಲೆಯ ಮೇಲೆ ಭಾರಿ ಗಾತ್ರದ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಘಟನಾ ಸ್ಥಳದಲ್ಲೇ ರಾಮಚಂದ್ರ ರೆಡ್ಡಿ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕಾಡುಗೋಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಹರೀಶ್ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.