ಬೆಂಗಳೂರು, ಮಾರ್ಚ್ 27: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿ. ಬೇಗೂರಿನ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲೇ ವಿದ್ಯಾರ್ಥಿನಿಗೆ ಪ್ರೇಮ ನಿವೇದನೆ ಮಾಡಿದ ಆರೋಪದ ಮೇಲೆ ಮೈಕ್ರೋಬಯಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಅಬ್ದುಲ್ ರೆಹಮಾನ್ ಷರೀಫ್ ಅವರನ್ನು ನೆಲಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 23ರಂದು ನಡೆದ ಈ ಘಟನೆಯಲ್ಲಿ, ಪ್ರಾಧ್ಯಾಪಕ ಅಬ್ದುಲ್ ವಿದ್ಯಾರ್ಥಿನಿಗೆ ಚಾಕೊಲೇಟ್ ನೀಡಿ ಪ್ರಪೋಸ್ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ನಡೆಗೆ ಆಕ್ರೋಶಗೊಂಡ ವಿದ್ಯಾರ್ಥಿನಿ, ತರಗತಿಯಲ್ಲೇ ಪ್ರಶ್ನೆ ಎತ್ತಿದ್ದಾಳೆ. ಈ ವೇಳೆ ಪ್ರಾಧ್ಯಾಪಕ, “ಈ ಹಿಂದೆ ನೀನು ನನಗೆ ಪ್ರಪೋಸ್ ಮಾಡಿಲ್ಲವೇ?” ಎಂದು ಪ್ರಶ್ನಿಸಿದ್ದು, ಸಿಸಿಟಿವಿ ದೃಶ್ಯದಲ್ಲಿ ಸಾಕ್ಷಿ ಇದೆ ಎಂದು ಹೇಳಿದ್ದಾನೆ ಎನ್ನಲಾಗಿದೆ. ಇದರಿಂದ ಮತ್ತಷ್ಟು ಕೆರಳಿದ ವಿದ್ಯಾರ್ಥಿನಿ, ಸಿಸಿಟಿವಿ ದೃಶ್ಯವನ್ನು ತೋರಿಸುವಂತೆ ಒತ್ತಾಯಿಸಿದ್ದಾಳೆ. ಆದರೆ, “ನಾಳೆ ಈ ಬಗ್ಗೆ ಮಾತನಾಡೋಣ” ಎಂದು ಹೇಳಿ ಪ್ರಾಧ್ಯಾಪಕ ತರಗತಿಯಿಂದ ಹೊರನಡೆದಿದ್ದಾನೆ.
ಈ ಘಟನೆಯಿಂದ ಕೋಪಗೊಂಡ ವಿದ್ಯಾರ್ಥಿನಿಯ ಸಹಪಾಠಿಗಳು, “ಸ್ತ್ರೀಕುಲಕ್ಕೆ ಗೌರವ ಇಲ್ಲವೇ?” ಎಂದು ಪ್ರಶ್ನಿಸಿ, ಪ್ರಾಧ್ಯಾಪಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಕಾಲೇಜು ಆವರಣದಲ್ಲೇ ಪ್ರಾಧ್ಯಾಪಕನನ್ನು ಬೆನ್ನಟ್ಟಿಕೊಂಡು ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಈ ವೇಳೆ ವಿದ್ಯಾರ್ಥಿನಿಯೇ ಚಪ್ಪಲಿಯಿಂದ ಹೊಡೆದಿರುವುದು ತಿಳಿದುಬಂದಿದೆ. ಹಲ್ಲೆಯಿಂದ ತಪ್ಪಿಸಿಕೊಂಡ ಬಳಿಕ ಪ್ರಾಧ್ಯಾಪಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಘಟನೆಯ ಪರಿಣಾಮವಾಗಿ ಕಾಲೇಜು ಆವರಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ತಿಳಿದ ಕೂಡಲೇ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದಲ್ಲಿ ಪ್ರಾಧ್ಯಾಪಕ ವಿರುದ್ಧ ಎಫ್ಐಆರ್ ದಾಖಲಿಸಿ, ಅವರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.