DAKSHINA KANNADA
ಚಪ್ಪಲಿಯಲ್ಲಿ ತುಳುನಾಡಿನ ಬಾವುಟ ಎಡಿಟ್ ಮಾಡಿ ಅವಹೇಳನ ಮಾಡಿದ್ದ ಬೆಂಗಳೂರಿನ ವ್ಯಕ್ತಿ ಬಂಧನ
ಮಂಗಳೂರು, ಜೂನ್ 19: ಸಾಮಾಜಿಕ ಜಾಲತಾಣದಲ್ಲಿ ತುಳುನಾಡಿನ ಬಾವುಟಕ್ಕೆ ಅವಹೇಳನ ಮಾಡಿದ್ದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಶ್ರೀರಾಮಂಪುರದ ಸೂರ್ಯ ಎನ್.ಕೆ. ಎಂಬಾತ ಬಂಧಿತ ಆರೋಪಿ.
ಈತ ಚಪ್ಪಲಿಯ ಚಿತ್ರದಲ್ಲಿ ತುಳುನಾಡಿನ ಬಾವುಟ ಎಡಿಟ್ ಮಾಡಿ ಅದನ್ನು ಫೇಸ್ಬುಕ್ನಲ್ಲಿ ಕಮೆಂಟ್ ವೊಂದರಲ್ಲಿ ಹಾಕಿ “ಇವತ್ತು ತುಳುನಾಡ್ ಚಪ್ಪಲ್ ಬಂದಿದೆ. ನಾಳೆ ಬಿಕಿನಿಯು ಬರಬಹುದು. ಹಾಕಿಕೊಂಡು ಮಜಾ ಮಾಡಿ.” ಎಂದು ಬರೆದಿದ್ದ ಎಂಬ ಆರೋಪವಿದೆ. ಇದಕ್ಕೆ ತುಳುನಾಡಿನಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಶಶಿಧರ್ ಹೆಗ್ಡೆ, ತುಳು ಬಾವುಟಕ್ಕೆ ಅಪಮಾನ ಮಾಡಿದ ಸೂರ್ಯ ಎನ್.ಕೆ. ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮಂಗಳೂರು ಪೊಲೀಸ್ ಕಮೀಷನರ್ಗೆ ದೂರು ನೀಡಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಬರ್ಕೆ ಠಾಣೆ ಪೊಲೀಸರು ಬೆಂಗಳೂರಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಈತನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
You must be logged in to post a comment Login