ಬೆಂಗಳೂರು ಡಿಸೆಂಬರ್ 17: ನಡು ರಸ್ತೆಯಲ್ಲೇ ಹೃದಯಾಘಾತದಿಂದ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಆತನ ಪತ್ನಿ ಅಂಗಲಾಚಿದರೂ ಸುತ್ತಮುತ್ತಲ ಜನ ನೆರವಾಗದ ಅಮಾನವೀಯ ಘಟನೆ ನಡೆದಿದೆ.

ಬೆಂಗಳೂರಿನ ಬನಶಂಕರಿ ಬಳಿ ಬೈಕ್ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ 34 ವರ್ಷದ ವ್ಯಕ್ತಿಗೆ ಹೃದಯಾಘಾತವಾಗಿದ್ದು, ಪತ್ನಿ ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಮುಂದೆ ಬಾರದ ಕಾರಣ, ಅವರು ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಡಿಸೆಂಬರ್ 13 ರಂದು ಬನಶಂಕರಿ ಬಳಿಯ ಕದಿರೇನಹಳ್ಳಿಯ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, 34 ವರ್ಷದ ವೆಂಕಟರಮಣನ್ ಹೃದಯಾಘಾತದಿಂದ ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಚಲಿಸುತ್ತಿದ್ದ ಬೈಕ್ನಲ್ಲಿಯೇ ವ್ಯಕ್ತಿಗೆ ಹೃದಯಾಘಾತವಾಗಿದೆ. ರಸ್ತೆಯಲ್ಲಿ ಬಿದ್ದು ಆತ ಒದ್ದಾಟ ನಡೆಸುತ್ತಿದ್ದರೆ, ಗಂಡನನ್ನು ಉಳಿಸಿಕೊಡಿ ಎಂದು ಪತ್ನಿ ರಸ್ತೆಗೆ ಹೋಗುವ ಕಾರು, ಬೈಕ್, ಗೂಡ್ಸ್ ವಾಹನ ಎಲ್ಲದಕ್ಕೂ ಕೈಹಾಕಿದ್ದಾರೆ. ಆದರೆ, ಯಾರೂ ಕೂಡ ತಮ್ಮ ವಾಹನ ನಿಲ್ಲಿಸಲಿಲ್ಲ.
ಇದರಿಂದಾಗಿ 34 ವರ್ಷದ ವ್ಯಕ್ತಿ ಸಾವಿನ ಕೊನೆಯ ಕ್ಷಣದಲ್ಲಿ ಒದ್ದಾಟ ಅನುಭವಿಸಿ ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ವ್ಯಕ್ತಿಗೆ ಮನೆಯಲ್ಲಿಯೇ ಸಣ್ಣ ಪ್ರಮಾಣದಲ್ಲಿ ಹಾರ್ಟ್ ಅಟ್ಯಾಕ್ ಆದ ಸೂಚನೆ ಸಿಕ್ಕಿತ್ತು. ಆಂಬ್ಯುಲೆನ್ಸ್ ಸಿಗದ ಹಿನ್ನಲೆಯಲ್ಲಿ ಬೈಕ್ ನಲ್ಲೇ ದಂಪತಿ ಆಸ್ಪತ್ರೆಗೆ ಹೋಗುತ್ತಿದ್ದರು.
ಈ ವೇಳೆ ಚಲಿಸುತ್ತಿದ್ದ ಬೈಕ್ನಲ್ಲೇ ಮತ್ತೊಮ್ಮೆ ದೊಡ್ಡ ಹಾರ್ಟ್ ಅಟ್ಯಾಕ್ ಆಗಿದೆ. ಈ ವೇಳೆ ಆತ ಬೈಕ್ನಿಂದ ಕೆಳಗೆ ಬಿದ್ದು ರಸ್ತೆಯಲ್ಲಿಯೇ ಒದ್ದಾಟ ನಡೆಸಿದ್ದಾರೆ. ಪತ್ನಿ ಜನರ ಸಹಾಯ ಕೇಳಲು ಮುಂದಾದರೆ ಯಾರೂ ಕೂಡ ಸಹಾಯಕ್ಕೆ ಧಾವಿಸಲಿಲ್ಲ. ಇದರಿಂದಾಗಿಯೇ ಅಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.
ಈ ದುರ್ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದ ವೆಂಕಟರಮಣನ್ ಕುಟುಂಬಸ್ಥರು, ಅವರ ಎರಡೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.



