ಬೆಂಗಳೂರು ಅಕ್ಟೋಬರ್ 30: ಒಬ್ಬಳೇ ಮಗಳು ಮಿದುಳು ರಕ್ತಸ್ರಾವದಿಂದ ಸಾವನಪ್ಪಿದ ಬಳಿಕದ ಎಲ್ಲಾ ಸರಕಾರಿ ಕಾರ್ಯಗಳಿಗೆ ಪ್ರತಿಯೊಂದು ಹಂತದಲ್ಲೂ ಲಂಚ ಕೇಳಿದ ಕುರಿತಂತೆ ನ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ನಿವೃತ್ತ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹೃದಯವಿದ್ರಾವಕ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಿಪಿಸಿಎಲ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಶಿವಕುಮಾರ್ ಅವರ 34 ವರ್ಷದ ಮಗಳು ನಿಧನದ ನಂತರ ನಡೆದ ಲಂಚಾವತಾರದ ಕುರಿತಂತೆ ಸಾಮಾಜಿಕ ಮಾಧ್ಯಮ ವೇದಿಕೆ ಲಿಂಕ್ಡ್ಇನ್ನಲ್ಲಿ ಭಾವನಾತ್ಮಕ ಟಿಪ್ಪಣಿ ಬರೆದಿದ್ದಾರೆ. ಗೋಲ್ಡ್ಮನ್ ಸ್ಯಾಚ್ಸ್ನಲ್ಲಿ ಎಂಟು ವರ್ಷಗಳು ಸೇರಿದಂತೆ 11 ವರ್ಷಗಳ ಕಾಲ ಕೆಲಸ ಮಾಡಿದ್ದ ಅಕ್ಷಯಾ, ಸೆಪ್ಟೆಂಬರ್ 18, 2025 ರಂದು ಮೆದುಳಿನ ರಕ್ತಸ್ರಾವದಿಂದಾಗಿ ನಿಧನರಾಗಿದ್ದರು.
ಮಗಳ ಸಾವಿನ ಬಳಿಕದ ಅಗತ್ಯ ದಾಖಲೆಗಳನ್ನು ಪಡೆಯಲು ಆಂಬ್ಯುಲೆನ್ಸ್ ನಿರ್ವಾಹಕರು ಮತ್ತು ಪೊಲೀಸ್ ಅಧಿಕಾರಿಗಳಿಂದ ಹಿಡಿದು ಸ್ಮಶಾನ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಯ ಸಿಬ್ಬಂದಿಯವರೆಗೆ ಬಹುತೇಕ ಎಲ್ಲರಿಗೂ ಲಂಚ ನೀಡಬೇಕಾಯಿತು ಎಂದು ಶಿವಕುಮಾರ್ ಹೇಳಿದ್ದಾರೆ. ಇತ್ತೀಚೆಗೆ ನನ್ನ ಏಕೈಕ ಮಗು 34 ನೇ ವಯಸ್ಸಿನಲ್ಲಿ ನಿಧನರಾದರು. ಆಂಬ್ಯುಲೆನ್ಸ್, ಪೊಲೀಸರು ಎಫ್ಐಆರ್ ಮತ್ತು ಮರಣೋತ್ತರ ಪರೀಕ್ಷೆ ವರದಿಗಾಗಿ, ರಶೀದಿ ನೀಡಲು ಸ್ಮಶಾನ, ಮರಣ ಪ್ರಮಾಣಪತ್ರಕ್ಕಾಗಿ ಬಿಬಿಎಂಪಿ ಕಚೇರಿಯಿಂದ ಬಹಿರಂಗವಾಗಿ ಲಂಚ ಕೇಳಲಾಗಿತ್ತು ಎಂದಿದ್ದಾರೆ.
ಪೊಲೀಸ್ ಠಾಣೆಯಲ್ಲಿಯೂ ಸಹ ನಗದು ರೂಪದಲ್ಲಿ ಪಾವತಿಸಲು ಹೇಗೆ ಒತ್ತಾಯಿಸಲಾಯಿತು ಎಂಬುದನ್ನು ಶಿವಕುಮಾರ್ ವಿವರಿಸಿದ್ದಾರೆ. “ಪೊಲೀಸರು ಎಫ್ಐಆರ್ ಮತ್ತು ಮರಣೋತ್ತರ ಪರೀಕ್ಷೆಯ ವರದಿಯ ಪ್ರತಿಯನ್ನು ನೀಡಬೇಕಾಗಿರುವುದರಿಂದ, ನಾವು ನಾಲ್ಕು ದಿನಗಳ ನಂತರ ಭೇಟಿಯಾದೆವು ಮತ್ತು ಅವರು ಬಹಿರಂಗವಾಗಿ ಹಣವನ್ನು ಕೇಳಿದರು, ಅದನ್ನು ನಾನು ಪೊಲೀಸ್ ಠಾಣೆಯಲ್ಲಿ ಪಾವತಿಸಿದೆ” ಎಂದು ಅವರು ಹೇಳಿದರು. ಮಗಳನ್ನು ಕಳೆದುಕೊಂಡ ತಂದೆಯ ಬಗ್ಗೆ ಪೊಲೀಸರಿಗೆ ಯಾವುದೇ ಸಹಾನುಭೂತಿ ಇಲ್ಲ. ತುಂಬಾ ದುಃಖಕರ ಸ್ಥಿತಿ. ನನ್ನ ಬಳಿ ಹಣವಿತ್ತು, ನಾನು ಪಾವತಿಸಿದೆ. ಬಡವರು ಏನು ಮಾಡುತ್ತಾರೆ” ಎಂದು ಅವರು ಮತ್ತಷ್ಟು ಬರೆದಿದ್ದಾರೆ.
ಕಸವನಹಳ್ಳಿಯ ಆಸ್ಪತ್ರೆಯಿಂದ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ತನ್ನ ಮಗಳ ಶವವನ್ನು ಸಾಗಿಸಲು ಆಂಬ್ಯುಲೆನ್ಸ್ ಚಾಲಕ 3,000 ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ಶಿವಕುಮಾರ್ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳು ಹಣಕ್ಕಾಗಿ ಬೇಡಿಕೆ ಇಟ್ಟಾಗ ಅಥವಾ ಈಗಾಗಲೇ ಆಘಾತದಲ್ಲಿರುವ ಮತ್ತು ಭಾವನಾತ್ಮಕ ಪ್ರಕ್ಷುಬ್ಧತೆಯಲ್ಲಿರುವ ವ್ಯಕ್ತಿಯೊಂದಿಗೆ ಅಸಭ್ಯವಾಗಿ ಮಾತನಾಡಿದಾಗ ಅವರಿಗೆ ಕುಟುಂಬ ಅಥವಾ ಭಾವನೆ ಇದೆಯೇ?” ಎಂದು ಅವರು ಕೇಳಿದರು. ಕುಟುಂಬವು ಬಿಬಿಎಂಪಿಯಿಂದ ಮರಣ ಪ್ರಮಾಣಪತ್ರವನ್ನು ಪಡೆಯಲು ಸಹ ಹೆಣಗಾಡಿತು ಎಂದು ಶಿವಕುಮಾರ್ ಹೇಳಿದರು. ಐದು ದಿನಗಳ ಕಾಲ ಕಚೇರಿಗೆ ಭೇಟಿ ನೀಡಿದ್ದಾಗಿ ಅವರು ಹೇಳಿಕೊಂಡರು, ಆದರೆ “ಜಾತಿ ಸಮೀಕ್ಷೆ” ನಡೆಯುತ್ತಿರುವುದರಿಂದ ಯಾರೂ ಲಭ್ಯವಿಲ್ಲ ಎಂದು ತಿಳಿಸಲಾಯಿತು. ಅಂತಿಮವಾಗಿ ಅವರು ಹಿರಿಯ ಬಿಬಿಎಂಪಿ ಅಧಿಕಾರಿಯನ್ನು ಸಂಪರ್ಕಿಸಿದ ನಂತರವೇ ಪ್ರಮಾಣಪತ್ರವನ್ನು ನೀಡಲಾಯಿತು, ಆದರೆ ಅಧಿಕೃತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಲಾಯಿತು.
ತಮ್ಮ ಪೋಸ್ಟ್ ಅನ್ನು ಮುಕ್ತಾಯಗೊಳಿಸುತ್ತಾ, ಶಿವಕುಮಾರ್ “ನಾರಾಯಣ ಮೂರ್ತಿ, ಅಜೀಂ ಪ್ರೇಮ್ಜಿ (ಮತ್ತು) ಮಜುಂದಾರ್ – ಕೋಟ್ಯಂತರ ಹಣವನ್ನು ಹೊಂದಿರುವ ದೊಡ್ಡ ವ್ಯಕ್ತಿಗಳು – ಈ ನಗರವನ್ನು ಉಳಿಸಬಹುದೇ?” ಎಂದು ಮನವಿ ಮಾಡಿದ್ದಾರೆ. ಇದಾದ ಕೆಲ ಹೊತ್ತಲ್ಲಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಶಿವಕುಮಾರ್ ಪೋಸ್ಟ್, ಆರೋಪ ಹಿನ್ನೆಲೆ ಪೊಲೀಸರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ. ಹಣ ಪಡೆದಿರುವುದು ತನಿಖೆಯಲ್ಲಿ ಖಾತರಿಯಾಗಿದೆ. ಹೀಗಾಗಿ, ಸಬ್ ಇನ್ಸ್ಪೆಕ್ಟರ್ ಸಂತೋಷ್, ಕಾನ್ಸ್ಟೇಬಲ್ ಗೋರಕ್ ನಾಥ್ ಅವರನ್ನು ಅಮಾನತು ಮಾಡಿ ವೈಟ್ಫೀಲ್ಡ್ ಡಿಸಿಪಿ ಪರಶುರಾಮ್ ಆದೇಶ ಹೊರಡಿಸಿದ್ದಾರೆ.