ಬೆಳ್ತಂಗಡಿ ಫೆಬ್ರವರಿ 12: ಗೂಡ್ಸ್ ವಾಹನಗಳಲ್ಲಿ ಜನರು ಸಂಚಾರ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ , ಅಂತಹದರಲ್ಲಿ ಶಾಲಾ ವಿಧ್ಯಾರ್ಥಿಗಳನ್ನು ಪಿಕಪ್ ಮತ್ತು ಲಾರಿಯೊಂದರಲ್ಲಿ ಅಧ್ಯಯನ ಪ್ರವಾಸಕ್ಕೆ ಕರೆದೊಯ್ದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಗೂಡ್ಸ್ ವಾಹನದಲ್ಲಿ ಜನರನ್ನು ಕರೆದೊಯ್ಯುವುದು ಕಾನೂನು ಬಾಹಿರ, ಅಲ್ಲದೆ ಇತ್ತೀಚೆಗೆ ಉಡುಪಿಯಲ್ಲಿ ಗೂಡ್ಸ್ ಟೆಂಪೋದಲ್ಲಿ ಸಂಚರಿಸುತ್ತಿದ್ದ ವೇಳೆ ಪಲ್ಟಿಯಾಗಿ ಕೂಲಿ ಕಾರ್ಮಿಕರು ಅಪಘಾತದಲ್ಲಿ ಸಾವನಪ್ಪಿದಂತಹ ಘಟನೆ ನಡೆದಿದೆ.
ಇದೀಗ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಪಾಠ ಹೇಳಬೇಕಾದ ಶಿಕ್ಷಕರು ಮಕ್ಕಳನ್ನು ತೆರೆದ ಪಿಕಪ್ ವಾಹನದಲ್ಲಿ ಕಾನೂನು ಬಾಹಿರವಾಗಿ ವಿಹಾರಕ್ಕೆ ಕರೆದೊಯ್ದ ಘಟನೆ ಬಳಂಜ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.

ಬೆಳ್ತಂಗಡಿ ತಾಲೂಕು ಬಳಂಜ ಗ್ರಾಮದ ಸರಕಾರಿ ಶಾಲೆಯ ಮಕ್ಕಳನ್ನು ವಿಹಾರಕ್ಕೆ ಕರೆದೊಯ್ಯಲು ಒಂದು ಸುರಕ್ಷಿತವಾದ ವಾಹನವನ್ನು ಗೊತ್ತು ಮಾಡುವ ಬದಲಾಗಿ ತೆರೆದ ಪಿಕಪ್ ವಾಹನದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಪಾಯಕಾರಿಯಾಗಿ ಕರೆದೊಯ್ದಿದ್ದು ಶಿಕ್ಷಕರ ಬೇಜವಾಬ್ದಾರಿ ಮತ್ತು ಅವಿವೇಕಿತನಕ್ಕೆ ಸಾಕ್ಷಿಯಾಗಿದೆ. ಮನರಂಜನೆ, ವಿಹಾರಗಳೆಂದರೆ ಸಹಜವಾಗಿ ಸಂಭ್ರಮಿಸುವ ಮುಗ್ಧ ಮಕ್ಕಳನ್ನು ಟಿಪ್ಪರ್, ಪಿಕಪ್ ನಲ್ಲಿ ವಿಹಾಕ್ಕೆ ಕರೆದುಕೊಂಡು ಹೊದ ಶಿಕ್ಷಕರ ಬೇಜವಾಬ್ದಾರಿಯ ನಡೆಯ ಬಗ್ಗೆ ಪೋಷಕರಿಂದ, ಸಾರ್ವಜನಿಕರಿಂದ ವ್ಯಾಪಕ ಅಕ್ರೋಶ ವ್ಯಕ್ತವಾಗಿದೆ. ಘಟನೆ ಬಗ್ಗೆ ಆಕ್ರೋಶಗೊಂಡ ಪೋಷಕರು ಈಗಾಗಲೇ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕೂಲಿಕಾರ್ಮಿಕರನ್ನು ಪಿಕಪ್, ಟಿಪ್ಪರ್ ಗಳಲ್ಲಿ ಕೆಲಸಕ್ಕೆ ಕರೆದೊಯ್ದ ಪ್ರಸಂಗಗಳಿಗೆ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸುವ ಪೊಲೀಸರು, ಬಳಂಜ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪಿಕಪ್, ಟಿಪ್ಪರ್ ಗಳಲ್ಲಿ ಪುಟಾಣಿ ಮಕ್ಕಳನ್ನು ವಿಹಾರಕ್ಕೆ ಕರೆದೊಯ್ದ ಘಟನೆಗೆ ಕಾರಣಕರ್ತರಾದ ಶಿಕ್ಷಕರ ವಿರುದ್ಧ ಪೊಲೀಸರು, ಆರ್ ಟಿ ಒ ಅಥವಾ ಶಿಕ್ಷಣ ಇಲಾಖೆ ಯಾವ ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತಿದ್ದಾರೆ.