ಬೆಳ್ತಂಗಡಿ ಡಿಸೆಂಬರ್ 18: ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ದಕ್ಷಿಣಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗೆ ಮಹೇಶ್ ಶೆಟ್ಟಿ ತಿಮರೋಡಿಗೆ ಗಡೀಪಾರು ಮಾಡಲು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು ಅಂತ ಕಾರಣ ಕೇಳಿ ನೋಟೀಸ್ ನೀಡಿದ್ದರು. ಈ ಹಿನ್ನಲೆ ಡಿಸೆಂಬರ್ 7 ರಂದು ಸಹಾಯಕ ಆಯುಕ್ತರ ಗಡೀಪಾರು ನೊಟೀಸ್ ಗೆ ಮಹೇಶ್ ಶೆಟ್ಟಿ ತಿಮರೋಡಿ ಆಕ್ಷೇಪಣೆ ಸಲ್ಲಿಸಿದ್ದರು.
ಪುತ್ತೂರು ಸಹಾಯಕ ಆಯುಕ್ತರ ಎದುರು ವಕೀಲರ ಮೂಲಕ ಆಕ್ಷೇಪಣೆ ಸಲ್ಲಿಸಿ ಗಡೀಪಾರು ನೊಟೀಸ್ ವಿರುದ್ದ ವಕೀಲರ ಮೂಲಕ ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ ಸಹಾಯಕ ಆಯುಕ್ತೆ ಇದೀಗ ಮತ್ತೆ ತಿಮರೋಡಿ ವಿರುದ್ದ ಗಡಿಪಾರು ಆದೇಶ ಮಾಡಿದ್ದಾರೆ. ದ.ಕ ಜಿಲ್ಲಾ ಪೊಲೀಸರು ತಿಮರೋಡಿ ಗಡೀಪಾರಿಗೆ ಸೂಕ್ತ ಕಾರಣ ನೀಡಿ ವರದಿ ಸಲ್ಲಿಕೆ ಮಾಡಿದ್ದರು. ಪೊಲೀಸ್ ವರದಿ ಆಧಾರದಲ್ಲಿ ತಿಮರೋಡಿಗೆ ಮತ್ತೆ ಗಡೀಪಾರು ಅದೇಶ ಮಾಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ದಕ್ಷಿಣಕನ್ನಡ ಜಿಲ್ಲೆಯಿಂದ ಗಡೀಪಾರು ಆದೇಶದ ಬೆನ್ನಲ್ಲೇ ಉಜಿರೆಯ ತಿಮರೋಡಿ ಮನೆಗೆ ಗಡೀಪಾರು ಆದೇಶ ನೀಡಲು ಬೆಳ್ತಂಗಡಿ ಪೊಲೀಸರು ತೆರಳಿದ್ದಾರೆ. ತಿಮರೋಡಿ ಮನೆಯಲ್ಲಿ ಇಲ್ಲದ ಕಾರಣ ಪೊಲೀಸರು ವಾಪಾಸ್ ಬಂದಿದ್ದು, ಗಡೀಪಾರು ಮಾಹಿತಿ ಬೆನ್ನಲ್ಲೇ ಅಜ್ಞಾತ ಸ್ಥಳಕ್ಕೆ ತಿಮರೋಡಿ ತೆರಳಿದ್ದಾರೆ ಎಂಬ ಮಾಹಿತಿ ಇದೆ.



