ಬಂಟ್ವಾಳ, ಏಪ್ರಿಲ್ 22: ಹವ್ಯಾಸಿ ರಂಗಭೂಮಿ ಕಲಾವಿದರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಚಿ ಎಂಬಲ್ಲಿ ಸಂಭವಿಸಿದೆ. ಮೃತರನ್ನು . ಉಳ್ಳಾಲ ತಾಲೂಕಿನ ಇರಾ ಗ್ರಾಮದ ಪಾತ್ರಾಡಿ ನಿವಾಸಿ ಮಿಥುನ್ ಪೂಜಾರಿ (40) ಎಂದು ಗುರುತಿಸಲಾಗಿದೆ.

ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಮಿಥುನ್ ಪೂಜಾರಿ ಅವರು ಸ್ಥಳೀಯವಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಇರಾದಲ್ಲಿ ಹೊಸ ಮನೆ ನಿರ್ಮಿಸಿದ ಬಳಿಕ ಇವರು ಮಂಚಿ ಸಮೀಪದಲ್ಲಿದ್ದ ತಮ್ಮ ಹಳೆಯ ಮನೆಗೆ ತೋಟಕ್ಕೆ ನೀರು ಬಿಡುವ ಕೆಲಸಕ್ಕಾಗಿ ಆಗಾಗ ಭೇಟಿ ನೀಡುತ್ತಿದ್ದರು. ಅದರಂತೆ ಸೋಮವಾರ ಬೆಳಗ್ಗೆ ಮನೆಯಿಂದ ಹೋದವರು ಸಂಜೆಯಾದರೂ ವಾಪಸಾಗದಿದ್ದಾಗ ಅನುಮಾನಗೊಂಡ ಸ್ಥಳೀಯರು ಹಾಗೂ ಸಂಬಂಧಿಕರು ಹಳೆಯ ಮನೆಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಹವ್ಯಾಸಿ ಕಲಾವಿದರಾಗಿದ್ದ ಮಿಥುನ್ ಪೂಜಾರಿ ಅವರು ಸ್ಥಳೀಯ ಹಲವು ನಾಟಕ ತಂಡಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಮೃತರು ಪತ್ನಿ ಹಾಗೂ ಎರಡು ವರ್ಷದ ಪುಟ್ಟ ಮಗುವನ್ನು ಅಗಲಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.