ಬೆಂಗಳೂರು ಮಾರ್ಚ್ 19: ನಿಶ್ಚಿತಾರ್ಥವಾಗಿದ್ದ ಅಪ್ರಾಪ್ತ ಬಾಲಕಿಯನ್ನು ಆಕೆಯ ಭಾವಿ ಪತಿಯೇ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ನಗರದ ಡಿಜೆ ಹಳ್ಳಿಯಲ್ಲಿ ನಡೆದಿದೆ. ಮದುವೆಯಾಗಬೇಕಿದ್ದ ಹುಡುಗಿಯ ಎದೆ ಭಾಗವನ್ನು ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಸೈಯದ್ ಶಬೀಲ್ ಎಂಬಾತ ವಿಕೃತಿ ಮೆರೆದಿದ್ದಾನೆ.

ಡಿಜೆ ಹಳ್ಳಿಯ ಈರುಳ್ಳಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಸೈಯದ್ ಶಬೀಲ್, ಕೋಲಾರ ಮೂಲದ ಅಪ್ರಾಪ್ತೆಯೊಂದಿಗೆ ಪ್ರೀತಿಯಲ್ಲಿದ್ದನು. ಇಬ್ಬರ ಪ್ರೇಮ ವಿಚಾರ ತಿಳಿದ ಪೋಷಕರು 2025ರ ಜೂನ್ ತಿಂಗಳಲ್ಲಿ ನಿಶ್ಚಿತಾರ್ಥ ನೆರವೇರಿಸಿದ್ದರು. ಆದರೆ, ನಿಶ್ಚಿತಾರ್ಥದ ನಂತರ ಶಬೀಲ್ಗೆ ಬಾಲಕಿಯ ಮೇಲೆ ಅನುಮಾನ ಮೂಡತೊಡಗಿತ್ತು ಎನ್ನಲಾಗಿದೆ.
ಇದೇ ದ್ವೇಷದಲ್ಲಿ ಬಾಲಕಿಯನ್ನು ಸಕ್ಕರೆ ಮಂಡಿ ಸಮೀಪದ ಸಂಬಂಧಿಕರ ಪಾಳುಬಿದ್ದ ಜಾಗಕ್ಕೆ ಕರೆಸಿಕೊಂಡಿದ್ದ ಆರೋಪಿ, ಅಲ್ಲಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಾಲಕಿಯ ದೇಹದ ಮೇಲೆ ಸುಮಾರು 17 ಬಾರಿ ಚಾಕುವಿನಿಂದ ಚುಚ್ಚಲಾಗಿದ್ದು, ಕುತ್ತಿಗೆ ಕೊಯ್ದು ವಿಕೃತವಾಗಿ ಹತ್ಯೆ ಮಾಡಲಾಗಿದೆ. ಬಾಲಕಿ ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ ವೇಳೆ ಶವ ಪತ್ತೆಯಾಗಿದೆ. ಆರೋಪಿ ಸೈಯದ್ ಶಬೀಲ್ ಸದ್ಯ ತಲೆಮರೆಸಿಕೊಂಡಿದ್ದು, ಡಿಜೆ ಹಳ್ಳಿ ಪೊಲೀಸರು ಪತ್ತೆಗಾಗಿ ಬಲೆ ಬೀಸಿದ್ದಾರೆ.