ಬಲೋತ್ರಾ, ಏಪ್ರಿಲ್ 02: ಪಿಸ್ತೂಲ್ ಮತ್ತು ದೊಣ್ಣೆಗಳೊಂದಿಗೆ ಯುವತಿಯನ್ನು ಅಪಹರಿಸಲು ಬಂದ ಹತ್ತು ಮಂದಿ ಅಪರಾಧಿಗಳನ್ನು ಮನೆಯ ಮಹಿಳೆಯರು ಪೊರಕೆ ಮತ್ತು ಕೋಲುಗಳಿಂದಲೇ ಹಿಮ್ಮೆಟ್ಟಿಸಿದ ಸಾಹಸಮಯ ಘಟನೆ ಕಲ್ಯಾಣಪುರ ಪೊಲೀಸ್ ಠಾಣಾ ವ್ಯಾಪ್ತಿಯ ರಾನಿಯಾ ದೇಶಿಪುರ ಗ್ರಾಮದಲ್ಲಿ ನಡೆದಿದೆ. ಈ ಭೀಕರ ಘಟನೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ಘಟನೆಯ ವಿವರ: ಬುಧವಾರ ಸಂಜೆ 5 ಗಂಟೆಯ ಸುಮಾರಿಗೆ ನಾರಾಯಣ್ ರಾಮ್ ಪಟೇಲ್ ಅವರ ಮನೆಗೆ ಎರಡು ಸ್ಕಾರ್ಪಿಯೋ ವಾಹನಗಳಲ್ಲಿ ಮುಖವಾಡ ಧರಿಸಿದ ಹತ್ತು ಮಂದಿ ದುಷ್ಕರ್ಮಿಗಳು ನುಗ್ಗಿದ್ದರು. ಮನೆಯಲ್ಲಿದ್ದ ಯುವತಿಯನ್ನು ಅಪಹರಿಸುವುದು ಇವರ ಸಂಚಾಗಿತ್ತು. ಅಪರಾಧಿಗಳು ಪಿಸ್ತೂಲ್ ತೋರಿಸಿ ಕುಟುಂಬಸ್ಥರನ್ನು ಬೆದರಿಸಲು ಯತ್ನಿಸಿದರು. ಆದರೆ, ಇದಕ್ಕೆ ಕಿಂಚಿತ್ತೂ ಎದರದ ಮನೆಯ ಮಹಿಳೆಯರು ಕೈಗೆ ಸಿಕ್ಕ ಪೊರಕೆ ಮತ್ತು ದೊಣ್ಣೆಗಳನ್ನು ಹಿಡಿದು ಪಾತಕಿಗಳ ಮೇಲೆ ಮುಗಿಬಿದ್ದಿದ್ದಾರೆ.
ಪರಾರಿಯಾದ ದುಷ್ಕರ್ಮಿಗಳು: ಮಹಿಳೆಯರ ರೌದ್ರಾವತಾರಕ್ಕೆ ಬೆದರಿದ ಅಪರಾಧಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸ್ಕಾರ್ಪಿಯೋ ಹತ್ತಿ ಪರಾರಿಯಾಗಿದ್ದಾರೆ. ಹೋಗುವಾಗ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಬೆದರಿಸಲು ಯತ್ನಿಸಿದರಾದರೂ, ಮಹಿಳೆಯರು ಬಿಡದೆ ಅವರನ್ನು ಬೆನ್ನಟ್ಟಿದ್ದಾರೆ. ಸ್ಥಳದಲ್ಲಿ ಪಿಸ್ತೂಲ್ನ ಮ್ಯಾಗಜೀನ್ ಒಂದು ಬಿದ್ದಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.