BANTWAL
ಮೂರು ದಿನದ ಕಂದಮ್ಮನ ಪ್ರಾಣ ತೆಗೆದ ಆಟೋ ರಿಕ್ಷಾ
ಬಂಟ್ವಾಳ : ಆಟೋ ರಿಕ್ಷಾ ಪಲ್ಟಿಯಾಗಿ ಉರುಳಿ ಬಿದ್ದ ಪರಿಣಾಮ ಮೂರು ದಿನದ ಹಸುಗೂಸು ಮೃತಪಟ್ಟಿರುವ ಘಟನೆ ಬಂಟ್ವಾಳದ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ನಿನ್ನೆ ನಡೆದಿದೆ.
ಗುರುಪುರ ಕೈಕಂಬ ಮೂಲದ ಉಮೈರಾ ಎಂಬ ಮಹಿಳೆ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮೂರು ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಬಿ.ಸಿ.ರೋಡು ಕಡೆ ಬರುವ ಖಾಲಿ ಅಂಬ್ಯುಲೆನ್ಸ್ ನಲ್ಲಿ ಬಂದು ಬಿ.ಸಿ.ರೋಡು ಕೈಕಂಬದಲ್ಲಿ ಇಳಿದು ಅಲ್ಲಿಂದ ಗೂಡಿನಬಳಿ ನಿವಾಸಿಯೋರ್ವರ ಅಟೋ ರಿಕ್ಷಾದಲ್ಲಿ ತೆರಳಿದ್ದರು.
ಅಟೋ ರಿಕ್ಷಾ ಬೆಂಜನಪದವು ಸಮೀಪದ ಕಲ್ಪನೆ ತಿರುವು ಬಳಿ ಬಂದಾಗ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಿಂದ ತಾಯಿಯ ಮಡಿಲಲ್ಲಿದ್ದ ಹಸುಗೂಸು ಹೊರಗೆಸೆಯಲ್ಪಟ್ಟು ಸ್ಥಳದಲ್ಲಿಯೇ ಮೃತಪಟ್ಟಿದೆ. ಉಮೈರಾ ಅವರಿಗೆ ನಾಲ್ಕು ಗಂಡು ಮಕ್ಕಳಿದ್ದು ಐದನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಮನೆ ಸೇರುವ ಮೊದಲೇ ಅಪಘಾತದಲ್ಲಿ ಮೃತಪಟ್ಟಿದೆ.
ರಿಕ್ಷಾದಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರಿಗೂ ಅಲ್ಪಸ್ವಲ್ಪ ಗಾಯಗಳಾಗಿದ್ದು, ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
You must be logged in to post a comment Login