LATEST NEWS
ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ನೌಷಾದ್ ಮೇಲೆ ಜೈಲಿನಲ್ಲಿ ಹಲ್ಲೆಗೆ ಯತ್ನ

ಮಂಗಳೂರು ಮೇ 19: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನೌಷಾದ್ ಮೇಲೆ ಮಂಗಳೂರಿನ ಜೈಲಿನಲ್ಲಿ ಸಹ ಖೈದಿಗಳು ಹಲ್ಲೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ ಎಂದು ತಿಳಿದು ಬಂದಿದೆ.
ಆರೋಪಿ ನೌಷಾದ್ ಯಾನೆ ವಾಮಂಜೂರು ನೌಷಾದ್ ಯಾನೆ ಚೊಟ್ಟೆ ನೌಷಾದ್ನನ್ನು ಮಂಗಳೂರು ಜೈಲಿನಿಂದ ಮೈಸೂರು ಜೈಲಿಗೆ ಸ್ಥಳಾಂತರಿಸುವ ವೇಳೆ ಇತರೆ ಕೆಲವು ಕೈದಿಗಳು ಕಲ್ಲು ಮತ್ತಿತರ ವಸ್ತುಗಳನ್ನು ಎಸೆದು ಹಲ್ಲೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ತಕ್ಷಣ ಜೈಲಿನ ಸಿಬ್ಬಂದಿಗಳು ಹಲ್ಲೆಯನ್ನು ತಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ನೌಷಾದ್ ಪೊಲೀಸ್ ಕಸ್ಟಡಿ ಅಂತ್ಯವಾಗಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಆತನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆತನನ್ನು ಮೈಸೂರು ಜೈಲಿಗೆ ಶಿಫ್ಟ್ ಮಾಡಲು ಪೊಲೀಸರು ಉದ್ದೇಶಿಸಿದ್ದರು.

ಈ ಮಧ್ಯೆ ಮಂಗಳೂರು ಜೈಲಿನಲ್ಲಿ ಯಾರನ್ನೋ ನೋಡಬೇಕು ಎಂದು ನೌಷಾದ್ ಹೇಳಿದ್ದ. ಜೈಲಿನಲ್ಲಿ ಮತ್ತೋರ್ವ ಕೈದಿ ಭೇಟಿಗಾಗಿ ಪೊಲೀಸರು ಕರೆದುಕೊಂಡು ಹೋಗಿದ್ದರು. ಆತನನ್ನು ನೋಡಿದ ಜೈಲಿನಲ್ಲಿದ್ದ ಇತರ ಕೈದಿಗಳು ಇದ್ದಕಿದ್ದಂತೆ ನೌಷಾದ್ ಮೇಲೆ ಕಲ್ಲು ಮತ್ತು ಸಿಕ್ಕ ಸಿಕ್ಕ ವಸ್ತು ತೂರಿ ದಾಳಿ ನಡೆಸಿದ್ದಾರೆ. ಇದೀಗ ನೌಷಾದ್ ನನ್ನು ಮೈಸೂರು ಜೈಲಿಗೆ ಸ್ಥಳಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.