ಚಿತ್ರದುರ್ಗ, ಏಪ್ರಿಲ್ 26: ಸರ್ಕಾರದ ವಿವಿಧ ಯೋಜನೆಗಳಡಿ ವಿತರಿಸಬೇಕಾದ ಧಾನ್ಯ ಹಾಗೂ ಆಹಾರ ಪದಾರ್ಥಗಳ ಅಕ್ರಮ ಸಂಗ್ರಹ ಅಡ್ಡೆ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆಅಧಿಕಾರಿಗಳು ಶನಿವಾರ ಅಪಾರ ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಶೋಧದ ವೇಳೆ ಒಟ್ಟು 105.60 ಕ್ವಿಂಟಲ್ ಅಕ್ಕಿ, 71.60 ಕ್ವಿಂಟಲ್ ಗೋಧಿ, 26.70 ಕ್ವಿಂಟಲ್ ರಾಗಿ ಹಾಗೂ 4 ಪ್ಯಾಕೆಟ್ ಮಿಲೆಟ್ ಲಡ್ಡು ಮತ್ತು 7 ಪ್ಯಾಕೆಟ್ ಪುಷ್ಟಿ ಆಹಾರವನ್ನು ಜಪ್ತಿ ಮಾಡಿದ್ದಾರೆ.
ನಗರದ ಹಳೇ ಬೆಂಗಳೂರು ರಸ್ತೆಯ ಇಂಡಸ್ಟ್ರಿಯಲ್ ಏರಿಯಾದ ಶ್ರೀ ಸಾಯಿ ಏಜೆನ್ಸಿ ಎದುರಿನ ಶೆಡ್ವೊಂದರಲ್ಲಿ ಪಡಿತರ ಧಾನ್ಯಗಳನ್ನು ಶೇಖರಿಸಿರುವ ಬಗ್ಗೆ ಅಪರಿಚಿತ ವ್ಯಕ್ತಿ ಬಡಾವಣೆ ಪೊಲೀಸ್ ಠಾಣೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಸ್ಪಷ್ಟ ಮಾಹಿತಿ ಆಧಾರದ ಮೇರೆಗೆ ಚಿತ್ರದುರ್ಗ ಅನೌಪಚಾರಿಕ ಪಡಿತರ ಪ್ರದೇಶದ ಆಹಾರ ಇನ್ಸ್ಪೆಕ್ಟರ್ ಎಂ.ರಂಜನಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಿಶೀಲನೆಯ ವೇಳೆ ಸರ್ಕಾರದಿಂದ ವಿವಿಧ ಯೋಜನೆಗಳಲ್ಲಿ ವಿತರಿಸುವ ಅಕ್ಕಿ, ರಾಗಿ, ಗೋಧಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ವಿತರಿಸುವ ಪುಷ್ಟಿ ಮತ್ತು ಮಿಲೆಟ್ ಲಡ್ಡುಗಳು ಇರುವುದು ಪತ್ತೆಯಾಗಿದೆ. ಈ ಕುರಿತು ವಿಚಾರಣೆ ನಡೆಸಿದಾಗ ಗೋದಾಮು ಸೈಯದ್ ಮುಜ್ಜು ಎಂಬುವವರಿಗೆ ಸೇರಿದ್ದೆಂದು ತಿಳಿದುಬಂದಿದೆ. ಈ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ..