ಮಂಜೇಶ್ವರ ಮಾರ್ಚ್ 27: ಕೇರಳ ರಾಜಕಾರಣದ ಅತ್ಯಂತ ಕುತೂಹಲಕಾರಿ ಕ್ಷೇತ್ರ ಅಂದ್ರೆ ಅದು ಮಂಜೇಶ್ವರ. ಕಳೆದ ಎರಡು ಚುನಾವಣೆಗಳಲ್ಲಿ ಇಲ್ಲಿ ಗೆಲುವಿನ ಅಂತರ ಎಷ್ಟಿತ್ತು ಗೊತ್ತಾ? ಕೇವಲ 89 ಮತ್ತು 745 ಮತಗಳು! ಇಂತಹ ಅಲ್ಪ ಅಂತರದ ಇತಿಹಾಸವಿರೋ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಸಮರ ಹೇಗಿರಲಿದೆ? ಯುಡಿಎಫ್ನ ಎ.ಕೆ.ಎಂ ಅಶ್ರಫ್ ಅಥವಾ ಬಿಜೆಪಿಯ ಕೆ. ಸುರೇಂದ್ರನ್ ನಡುವಿನ ಜಿದ್ದಾಜಿದ್ದಿ ಹೆಗಿರಲಿದೆ.

ಸದ್ಯಕ್ಕೆ ಮಂಜೇಶ್ವರದ ಕಣದಲ್ಲಿ ಯುಡಿಎಫ್ನ ಎ.ಕೆ.ಎಂ ಅಶ್ರಫ್ ಅವರಿಗೆ ಸ್ವಲ್ಪ ಮುನ್ನಡೆ ಸಾಧಿಸಿದಂತೆ ಕಾಣುತ್ತಿದೆ. ಇದಕ್ಕೆ ಕಾರಣ ಕಳೆದ ಸ್ಥಳೀಯ ಸಂಸ್ಥೆಗಳ ಚುನಾವಣೆ. ಮಂಜೇಶ್ವರ ಕ್ಷೇತ್ರದ ಎಂಟು ಪಂಚಾಯತ್ಗಳು ಮತ್ತು ನಾಲ್ಕು ಜಿಲ್ಲಾ ಪಂಚಾಯತ್ ವಿಭಾಗಗಳಲ್ಲಿ ಯುಡಿಎಫ್ ಭರ್ಜರಿ ಜಯ ಸಾಧಿಸಿದೆ. ಅಷ್ಟೇ ಅಲ್ಲ, ಅಶ್ರಫ್ ಅವರು ಕೇವಲ ರಾಜಕೀಯ ನಾಯಕನಾಗಿ ಉಳಿದಿಲ್ಲ. ಶಿರೂರು ಭೂಕುಸಿತದ ಸಮಯದಲ್ಲಿ ಅರ್ಜುನ್ ಎಂಬ ಚಾಲಕನ ಪತ್ತೆಗಾಗಿ ಅವರು ನಡೆಸಿದ 72 ದಿನಗಳ ಹೋರಾಟ ಜನರಲ್ಲಿ ಅವರ ಬಗ್ಗೆ ಒಂದು ಭಾವನಾತ್ಮಕ ಗೌರವ ಮೂಡಿಸಿದೆ. ಮೊನ್ನೆ ನಾಮಪತ್ರ ಸಲ್ಲಿಸಲು ಅರ್ಜುನ್ ತಾಯಿ ಹಣ ನೀಡಿದ್ದು ಇದಕ್ಕೆ ಸಾಕ್ಷಿ. ಮತದಾರರ ಪಟ್ಟಿಯ ಪರಿಷ್ಕರಣೆಯ ನಂತರ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವುದು ಅಶ್ರಫ್ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.

ಇತ್ತ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ನಾಲ್ಕನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ ಈ ಬಾರಿ ಬಿಜೆಪಿ ತನ್ನ ಹಳೆಯ ಧಾರ್ಮಿಕ ಧ್ರುವೀಕರಣದ ಹಾದಿ ಬಿಟ್ಟು ‘ಭಾಷಾ ಅಸ್ತ್ರ’ವನ್ನು ಕೈಗೆತ್ತಿಕೊಂಡಿದೆ. ನಾಮಪತ್ರ ಸಲ್ಲಿಸುವಾಗ ಸುರೇಂದ್ರನ್ ಅವರು ‘ಜೈ ತುಳು’ ಮತ್ತು ಸೂರ್ಯ-ಚಂದ್ರನ ಚಿತ್ರವಿರೋ ಶಾಲು ಧರಿಸಿದ್ದು ಎಲ್ಲರ ಗಮನ ಸೆಳೆಯಿತು. ಮಲಯಾಳಂ ಭಾಷಾ ಮಸೂದೆಯಿಂದ ಅಸಮಾಧಾನಗೊಂಡಿರುವ ಕನ್ನಡ ಮತ್ತು ತುಳು ಭಾಷಿಕರ ಮತಗಳನ್ನು ಸೆಳೆಯುವುದು ಬಿಜೆಪಿಯ ಮಾಸ್ಟರ್ ಪ್ಲಾನ್. ಧರ್ಮದ ಆಚೆಗೂ ಭಾಷಾ ಪ್ರೇಮ ಕೆಲಸ ಮಾಡಿದರೆ ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿದೆ. ಸಾರ್ವಜನಿಕವಾಗಿ ಅಭಿವೃದ್ಧಿ ಮತ್ತು ಭಾಷೆಯ ಬಗ್ಗೆ ಮಾತನಾಡಿದರೂ, ತೆರೆಯ ಮರೆಯಲ್ಲಿ ‘ಹಿಂದೂ ಏಕತಾ ಸಮ್ಮೇಳನ’ಗಳ ಮೂಲಕ ಮತಗಳ ಧ್ರುವೀಕರಣಕ್ಕೆ ಆರೆಸ್ಸೆಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿವೆ.
ಸಿಪಿಐ(ಎಂ) ಈ ಬಾರಿ ಅನುಭವಿ ನಾಯಕ ಕೆ.ಆರ್. ಜಯಾನಂದ ಅವರನ್ನು ಕಣಕ್ಕಿಳಿಸಿದೆ. ಆದರೆ, ಅಲ್ಪಸಂಖ್ಯಾತ ಮತಗಳು ವಿಭಜನೆಯಾಗಿ ಬಿಜೆಪಿಗೆ ಲಾಭವಾಗಬಾರದು ಎಂಬ ಆತಂಕ ಎಲ್ಡಿಎಫ್ ಪಾಳೆಯದಲ್ಲಿದೆ. ಇವರ ಮತಗಳಿಕೆ ಕುಸಿದರೆ ಅದು ನೇರವಾಗಿ ಯುಡಿಎಫ್ ಅಥವಾ ಬಿಜೆಪಿಯ ಜಯದ ಅಂತರವನ್ನು ನಿರ್ಧರಿಸಲಿದೆ.
ಇನ್ನೊಂದೆಡೆ ಮಂಜೇಶ್ವರ ಚುನಾವಣಾ ಕಣದಲ್ಲಿ ಈಗ ಹೊಸ ಹೈಡ್ರಾಮಾ ಶುರುವಾಗಿತ್ತು, ಎಸ್ಡಿಪಿಐ ಯುಡಿಎಫ್ ಅಭ್ಯರ್ಥಿಯ ಹೆಸರೇ ಇರುವ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು, ಆದರೆ ಭಾರೀ ವಿರೋಧದನ ನಡುವೆ ಇದೀಗ ಎಸ್ ಡಿಪಿಐ ಅಭ್ಯರ್ಥಿ ಅಶ್ರಫ್ ಕೆ.ಎಂ. ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಇದರೊಂದಿಗೆ ಯುಡಿಎಫ್ನ ಎ.ಕೆ.ಎಂ. ಅಶ್ರಫ್ ಅವರಿಗೆ ಸ್ವಲ್ಪ ಬಲ ಹೆಚ್ಚಾಗಿದೆ.
ಮಂಜೇಶ್ವರದಲ್ಲಿ ಅಸಲಿ ಆಟ ಇರೋದು ಅಂಕಿ-ಅಂಶಗಳಲ್ಲಿ. ಈ ಬಾರಿ ಮತದಾರರ ಪಟ್ಟಿಯಿಂದ ಸುಮಾರು 17,000 ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ ಯಾರ ಮತಗಳು ಹೆಚ್ಚು ಕಡಿತವಾಗಿವೆ ಎಂಬುದು ಗೆಲುವಿನ ಅಂತರವನ್ನು ನಿರ್ಧರಿಸಲಿದೆ. ಪ್ರಸ್ತುತ ಪಟ್ಟಿಯ ಪ್ರಕಾರ 1.3 ಲಕ್ಷ ಮುಸ್ಲಿಂ ಮತದಾರರು ಮತ್ತು 90,000 ಹಿಂದೂ ಮತದಾರರಿದ್ದಾರೆ. ಕಾಗದದ ಮೇಲೆ ಇದು ಯುಡಿಎಫ್ಗೆ ಅನುಕೂಲಕರವಾಗಿ ಕಂಡರೂ, ಹಿಂದೂ ಮತಗಳ ಶೇ. 80ರಷ್ಟು ಕ್ರೋಢೀಕರಣವಾದರೆ ಬಿಜೆಪಿಗೆ ದೊಡ್ಡ ಬಲ ಸಿಗಲಿದೆ. ಇನ್ನು ಎಲ್ಡಿಎಫ್ನ ಜೆ. ಜಯಾನಂದ್ ಅವರು ಎಷ್ಟು ಮತಗಳನ್ನು ಪಡೆಯುತ್ತಾರೆ ಎಂಬುದು ಕೂಡ ಅಷ್ಟೇ ನಿರ್ಣಾಯಕ. ಅಲ್ಲದೆ ಇರಾನ್ ಮತ್ತು ಅಮೇರಿಕಾದ ನಡುವೆ ಯುದ್ದ ಭೀತಿ ಇದ್ದು, ಗಲ್ಪ್ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಕೇರಳದ ಮತದಾರರು ಈ ಬಾರಿ ಮತದಾನದಲ್ಲಿ ಭಾಗವಹಿಸುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಮಂಜೇಶ್ವರ ಈ ಬಾರಿಯೂ ಒಂದು ಪೋಟೋಫಿನಿಶ್ ಚುನಾವಣಾ ಕಣಕ್ಕೆ ಸಾಕ್ಷಿಯಾಗುತ್ತಿದೆ. ಅಶ್ರಫ್ ಅವರ ಮಾನವೀಯ ವರ್ಚಸ್ಸು ಗೆಲ್ಲುತ್ತಾ? ಅಥವಾ ಸುರೇಂದ್ರನ್ ಅವರ ಭಾಷಾ ಮತ್ತು ಹಿಂದುತ್ವದ ತಂತ್ರಗಾರಿಕೆ ಕೆಲಸ ಮಾಡುತ್ತಾ? ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.