ಪುತ್ತೂರು ಡಿಸೆಂಬರ್ 05: ಮನೆ ಕಳೆದುಕೊಂಡು ರಸ್ತೆ ಬಂದಿದ್ದ ವೃದ್ದ ದಂಪತಿಗಳ ನೆರವಿಗೆ ಪುತ್ತೂರು ಶಾಸಕ ಅಶೋಕ್ ರೈ ಬಂದಿದ್ದಾರೆ. ಮನೆ ಕಳೆದುಕೊಂಡು ನ್ಯಾಯಕ್ಕಾಗಿ ಕಳೆದ ಒಂಬತ್ತು ದಿನಗಳಿಂದ ಪುತ್ತೂರು ಸಹಾಯಕ ಆಯುಕ್ತರ ಕಛೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ವೃದ್ಧ ದಂಪತಿಗಳ ಧರಣಿ ಪುತ್ತೂರು ಶಾಸಕರ ಮಧ್ಯಪ್ರವೇಶದಿಂದ ಕೊನೆಗೂ ಮುಕ್ತಾಯಗೊಂಡಿದೆ. ಧರಣಿ ನಿರತ ವೃದ್ಧ ದಂಪತಿಗಳಿಗೆ ಮನೆ ನಿವೇಶನ ಮತ್ತು ಮನೆ ನಿರ್ಮಿಸಿಕೊಡುವ ವಾಗ್ದಾನ ನೀಡುವ ಮೂಲಕ ವಿವಾದಕ್ಕೆ ನಾಂದಿ ಹಾಡಲಾಗಿದೆ.

ತಮ್ಮ ಮನೆಯನ್ನು ಕಡಬ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ವೃದ್ಧ ದಂಪತಿಗಳು ತಮ್ಮ ಧರಣಿಯನ್ನು ಕೈಬಿಟ್ಟಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕಾಪಿನಬಾಗಿಲು ಎಂಬಲ್ಲಿ ಕಳೆದ ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದ ರಾಧಮ್ಮ-ಮುತ್ತುಸ್ವಾಮಿ ದಂಪತಿಗಳ ಮನೆಯನ್ನು 13.11.2024 ರಂದು ಅಕ್ರಮ ನಿರ್ಮಾಣ ಎನ್ನುವ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ತೆರವುಗೊಳಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ವೃದ್ಧ ದಂಪತಿಗಳು ತಮಗೆ ನ್ಯಾಯ ಒದಗಿಸಬೇಕೆಂದು ಕಳೆದ ಡಿಸೆಂಬರ್ 29 ರಂದು ಪುತ್ತೂರು ಸಹಾಯಕ ಆಯುಕ್ತರ ಕಛೇರಿ ಮುಂಭಾಗದಲ್ಲಿ ಧರಣಿ ಆರಂಭಿಸಿದ್ದರು. ಈ ನಡುವೆ ಧರಣಿ ನಿರತರನ್ನು ಭೇಟಿಯಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ದಂಪತಿಗಳಿಗೆ ನ್ಯಾಯದ ಭರವಸೆ ನೀಡಿದ್ದರು. ಈ ಸಂಬಂಧ ಇಂದು ಪುತ್ತೂರು ಸಹಾಯಕ ಆಯುಕ್ತ, ಕಡಬ ತಹಶೀಲ್ದಾರ್ ಅವರೊಂದಿಗೆ ಚರ್ಚೆ ನಡೆಸಿ ವೃದ್ಧ ದಂಪತಿಗಳು ಅವರು ಇದ್ದ ಜಾಗದಲ್ಲೇ ಮನೆ ನಿರ್ಮಿಸಲು ವ್ಯವಸ್ಥೆಯನ್ನು ಮಾಡುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೆ ಅದೇ ಜಾಗವನ್ನು 94 ಸಿ ಮೂಲಕ ಹಕ್ಕುಪತ್ರ ನೀಡಲೂ ತೀರ್ಮಾನಿಸಲಾಗಿದೆ.

ರಾಧಮ್ಮ- ಮುತ್ತುಸ್ವಾಮಿ ಇದ್ದ ಜಾಗಕ್ಕೆ ನಾಲ್ಕೈದು ವರ್ಷಗಳ ಹಿಂದೆಯೇ ಅಕ್ರಮ-ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ನಿರಾಕರಿಸಲಾಗಿತ್ತು. ಇದೀಗ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದ್ದು, ಆ ಮೂಲಕ ಅದೇ ಜಾಗವನ್ನು ನೀಡಲು ಅಧಿಕಾರಿಗಳು ಕ್ರಮವನ್ನೂ ಕೈಗೊಂಡಿದ್ದಾರೆ. ವೃದ್ಧ ದಂಪತಿಗಳ ಮನೆ ತೆರವುಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖಾ ವರದಿಯೂ ಇನ್ನೇನು ಕೆಲವೇ ದಿನಗಳಲ್ಲಿ ಹಿರಿಯ ಅಧಿಕಾರಿಗಳ ಕೈ ಸೇರಲಿದೆ.
ಇದನ್ನೂ ಓದಿ- ಬಸ್ ಓವರ್ ಟೆಕ್ ಮಾಡಲು ಹೋಗಿ ಬಿದ್ದ ಸ್ಕೂಟರ್ ಸವಾರನನ್ನು ತನ್ನ ಜೀವದ ಹಂಗು ತೊರೆದು ಉಳಿಸಿದ ಕಾರಿನ ಚಾಲಕ – ವಿಡಿಯೋ ವೈರಲ್
ನ್ಯಾಯಕ್ಕಾಗಿ ಕಳೆದ ಒಂದು ವರ್ಷದಿಂದ ಬಡ ವೃದ್ಧ ದಂಪತಿಗಳು ಹೋಗದ ಕಛೇರಿಗಳಿಲ್ಲ. ಯಾರೂ ಕೂಡ ಸ್ಪಂದನೆ ನೀಡದಾಗ ಅನಿವಾರ್ಯವಾಗಿ ಧರಣಿ ನಡೆಸಲು ಮುಂದಾಗಿದ್ದರು. ಇದೀಗ ಪುತ್ತೂರು ಶಾಸಕರು ಮುತುವರ್ಜಿ ವಹಿಸಿ ಈ ಪ್ರಕರಣವನ್ನು ಮುಕ್ತಾಯಗೊಳಿಸಿದ್ದು, ಧರಣಿ ನಿರತರ ಸಂತಸಕ್ಕೂ ಕಾರಣವಾಗಿದೆ.



