LATEST NEWS
ಬೆಂಗಳೂರು ಕಾಲ್ತುಳಿತಕ್ಕೆ ವಿರಾಟ್ ಕೊಹ್ಲಿಯನ್ನು ಆರೋಪಿಯನ್ನಾಗಿಸಿ ಜೈಲಿಗೆ ಕಳುಹಿಸುವ ಹುನ್ನಾರ – ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ

ಉಡುಪಿ, ಜುಲೈ 19: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಕಾಲ್ತುಳಿತಕ್ಕೆ ವಿರಾಟ್ ಕೊಹ್ಲಿ ಅವರನ್ನು ಆರೋಪಿಯನ್ನಾಗಿಸಿ ಕೊಹ್ಲಿಯನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಲಾಗಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಕೊಹ್ಲಿ ಅಭಿಮಾನಿಗಳ ಕ್ಷಮೆಯಾಚಿಸಬೇಕು ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಪೊಲೀಸ್ ಇಲಾಖೆಯಲ್ಲಿನ ರಾಜಕೀಯವೇ ಕಾರಣ ಎಂದು ಆರೋಪಿಸಿದರು. ಕಾಲ್ತುಳಿತ ಪ್ರಕರಣ ಸಂಬಂಧ ಸರ್ಕಾರ ಹೈಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಸರಕಾರದ ಈ ವರದಿಯನ್ನು ನಾನು ವಿರೋಧಿಸುತ್ತೇನೆ. ಬೆಂಗಳೂರಿನಲ್ಲಿ ಸಕ್ರಿಯವಾಗಿರುವ ಸ್ಮಗ್ಲಿಂಗ್ ಮಾಫಿಯಾ ಇದರ ಹಿಂದಿದೆ. ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಗುಂಪುಗಳ ಸಹಾಯ ಪಡೆದು ಕಾಲ್ತುಳಿತ ನಡೆದ ಸ್ಥಳದಲ್ಲಿ ಗೊಂದಲ ಸೃಷ್ಟಿಸಲಾಗಿತ್ತು ಎಂದು ಆರೋಪಿಸಿರುವ ಅನುಪಮಾ ಶೆಣೈ, ಈ ಬಗ್ಗೆ ಮ್ಯಾಜಿಸ್ಟ್ರಿಯಲ್ ತನಿಖೆ ನಡೆಸುತ್ತಿರುವ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಅವರಿಗೂ ಪತ್ರ ಬರೆದಿದ್ದೇನೆ ಎಂದರು.

ಮೇಲ್ನೋಟಕ್ಕೆ ವಿರಾಟ್ ಕೊಹ್ಲಿಯನ್ನು ಆರೋಪಿಯನ್ನಾಗಿ ಮಾಡುವ ಹುನ್ನಾರ ಕಂಡುಬರುತ್ತದೆ. ವಿರಾಟ್ ಕೊಹ್ಲಿ ಅವರ ಸಾಮಾಜಿಕ ಜಾಲತಾಣ ವಿಡಿಯೋ ನೋಡಿ ಜನ ಬಂದಿದ್ದಾರೆ ಎನ್ನಲಾಗುತ್ತಿದೆ. ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣದ ವಿಡಿಯೋವನ್ನು ದೇಶ ವಿದೇಶಗಳಲ್ಲಿಯೂ ಲಕ್ಷಾಂತರ ಜನ ನೋಡುತ್ತಾರೆ. ಒಂದೇ ದಿನದಲ್ಲಿ ಜನ ವಿಮಾನ ಹತ್ತಿ ಬಂದು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರಾ ಎಂದು ಶೆಣೈ ಪ್ರಶ್ನಿಸಿದರು.
ವಿರಾಟ್ ಕೊಹ್ಲಿ ವಿಡಿಯೋ ನೋಡಿದವರೆಲ್ಲಾ ಕಾರ್ಯಕ್ರಮದ ಸ್ಥಳಕ್ಕೆ ಬಂದ ಬಗ್ಗೆ ಸಿಎಂ ಸಿದ್ದರಾಮಯ್ಯನವರಲ್ಲಿ ದಾಖಲೆ ಇದೆಯಾ? ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ಸಿಕ್ಕಿದ ಚಪ್ಪಲಿಗಳು ಹಾಗೂ ಇತರ ಕುರುಹುಗಳನ್ನು ನೋಡಿದರೆ ಅವರಲ್ಲಿ ಹೆಚ್ಚಿವರು ಸಾಮಾನ್ಯ ಜನರು ಎಂಬುದು ಗೊತ್ತಾಗುತ್ತದೆ. ಅವರೆಲ್ಲರೂ ಸಾಮಾಜಿಕ ಮಾಧ್ಯಮ ಪೋಸ್ಟ್ ನೋಡಿ ಅಲ್ಲಿಗೆ ಬಂದವರಲ್ಲ. ಕೂಡಲೇ ಸಿಎಂ ಸಿದ್ದರಾಮಯ್ಯ ವಿರಾಟ್ ಕೊಹ್ಲಿ ಅಭಿಮಾನಿಗಳ ಕ್ಷಮೆ ಕೇಳಬೇಕು. ಆರ್ಸಿಬಿ ಪರ ವಕೀಲರು ನಾನು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಬರೆದ ಪತ್ರವನ್ನು ಪರಿಶೀಲಿಸಬೇಕು. ವಿರಾಟ್ ಕೊಹ್ಲಿಯನ್ನು ರಕ್ಷಿಸಬೇಕು ಎಂದು ಅನುಪಮಾ ಶೆಣೈ ಹೇಳಿದರು.