ಮಂಗಳೂರು ಎಪ್ರಿಲ್ 07: ಜಿಲ್ಲೆಯಲ್ಲಿ ಈಗಾಗಲೇ ಇರುವ ಮೂರು ಟೋಲ್ ಫ್ಲಾಜಾಗಳ ದರ ಏರಿಕೆ ಬಿಸಿಯ ನಡುವೆಯೇ, ಹೊಸದಾಗಿ ಮತ್ತೆ ಮೂರು ಟೋಲ್ ಗೇಟ್ಗಳು ನಿರ್ಮಾಣವಾಗುತ್ತಿರುವುದು ಸಾರ್ವಜನಿಕರು ಮತ್ತು ಹೋರಾಟಗಾರರ ಕೆಣ್ಣಿಗೆ ಕೆಂಪು ಬಟ್ಟೆ ತೋರಿದಂತಾಗಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ’60 ಕಿಲೋಮೀಟರ್ಗೆ ಒಂದೇ ಟೋಲ್’ ನಿಯಮ ದಕ್ಷಿಣ ಕನ್ನಡದಲ್ಲಿ ಗಾಳಿಗೆ ತೂರಲ್ಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಸ್ತುತ ಬ್ರಹ್ಮರಕೂಟ್ಟು (ರಾ.ಹೆ. 75), ತಲಪಾಡಿ (ರಾ.ಹೆ. 66) ಮತ್ತು ಹೆಜಮಾಡಿಯಲ್ಲಿ ಟೋಲ್ಗಳಿವೆ. ಇದೀಗ ಗಂಜಿಮಠ (ರಾ.ಹೆ. 169), ವಳಾಲು (ರಾ.ಹೆ. 75) ಮತ್ತು ಚಾರ್ಮಾಡಿ ರಸ್ತೆಯ ಪಣಪಿಲದಲ್ಲಿ ಹೊಸ ಟೋಲ್ಗಳು ಸಿದ್ಧವಾಗುತ್ತಿವೆ. ಗಂಜಿಮಠ ಟೋಲ್ ಮಂಗಳೂರಿನಿಂದ ಕೇವಲ 17 ಕಿ.ಮೀ ಅಂತರದಲ್ಲಿದ್ದರೆ, ವಳಾಲು ಟೋಲ್ ಬ್ರಹ್ಮರಕೂಟ್ಟಿನಿಂದ ಕೇವಲ 35 ಕಿ.ಮೀ ದೂರದಲ್ಲಿದೆ. ದ್ವಿಪಥ ರಸ್ತೆಗೂ ಟೋಲ್ ವಸೂಲಿ ಮಾಡುವುದು ಎಷ್ಟು ನ್ಯಾಯ ಎಂಬ ಪ್ರಶ್ನೆ ಈಗ ಜಿಲ್ಲೆಯಾದ್ಯಂತ ಪ್ರತಿಧ್ವನಿಸುತ್ತಿದೆ. ಸುರತ್ಕಲ್ ಟೋಲ್ ತೆರವುಗೊಳಿಸಿದ ಮಾದರಿಯಲ್ಲೇ ಈಗ ಬ್ರಹ್ಮರಕೂಟ್ಟು ಮತ್ತು ಹೊಸ ಟೋಲ್ಗಳ ವಿರುದ್ಧ ಮಾಜಿ ಸಚಿವ ರಮಾನಾಥ ರೈ ನೇತೃತ್ವದ ‘ಟೋಲ್ ವಿರೋಧಿ ಹೋರಾಟ ಸಮಿತಿ’ ಪಾದಯಾತ್ರೆಗೆ ಸಜ್ಜಾಗಿದೆ. ಸ್ಥಳೀಯರ ಅಭಿಪ್ರಾಯ ಕ್ರೋಢೀಕರಿಸುತ್ತಿರುವ ಸಮಿತಿಯು, ಅವೈಜ್ಞಾನಿಕ ಟೋಲ್ ನಿರ್ಮಾಣ ನಿಲ್ಲಿಸದಿದ್ದರೆ ತೀವ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.