ಪುತ್ತೂರು ಜನವರಿ 01: ಕೆಯ್ಯೂರು ಗ್ರಾಮದ ಮಾಡಾವು ಸೇತುವೆಯ ಬಳಿ ಗೌರಿ ಹೊಳೆಗೆ ಕಿಡಿಗೇಡಿಗಳು ಪ್ರಾಣಿಯ ತ್ಯಾಜ್ಯಗಳನ್ನು ಗೋಣಿ ಚೀಲದಲ್ಲಿ ಎಸೆದಿದ್ದು, ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಸಂಪ್ಯ ಠಾಣೆ ಪೊಲೀಸರು ಹಾಗೂ ಪಶುವೈದ್ಯಾಧಿಕಾರಿಗಳ ಮತ್ತು ಎಫ್ಎಸ್ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಅಪರಾಧ ವಿಭಾಗದ ಎಸ್ಐ ಸುಷ್ಮಾ ಜಿ.ಭಂಡಾರಿ, ಎಎಸ್ಐ ಮುರುಗೇಶ್, ಸಿಬ್ಬಂದಿ ಭವಿತ್ ರೈ, ನಾಗೇಶ್, ರಾಧಾಕೃಷ್ಣ, ಹಕೀಂ, ಪಶು ವೈದ್ಯಾಧಿಕಾರಿ ಪ್ರಕಾಶ್, ಎಫ್ಎಸ್ಎಲ್ ಸಿಬ್ಬಂದಿ ಸುಮನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ಆರು ಮೇಕೆಗಳ ತ್ಯಾಜ್ಯ ಗೋಣಿ ಚೀಲದಲ್ಲಿ ಕಂಡು ಬಂದಿದೆ ಎಂದು ಪಶು ವೈದ್ಯಾಧಿಕಾರಿ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಗೌರಿ ಹೊಳೆಯಲ್ಲಿನ ಮಾಡಾವು ಸೇತುವೆಯಡಿ ಗೋಣಿ ಚೀಲದ ಕಟ್ಟುಗಳು ಇರುವ ಮತ್ತು ದುರ್ವಾಸನೆ ಬರುತ್ತಿರುವ ಕುರಿತು ಸ್ಥಳೀಯರು ಮಂಗಳವಾರ ಕೆಯ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್ಕುಮಾರ್ ಅವರ ಗಮನಕ್ಕೆ ತಂದಿದ್ದರು. ಬಳಿಕ ಶರತ್ ಕುಮಾರ್ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.
ಕಿಡಿಗೇಡಿಗಳು ಗ್ರಾಮ ಪಂಚಾಯಿತಿ ಹೆಸರು ಕೆಡಿಸುವ ಉದ್ದೇಶದಿಂದ ಈ ರೀತಿಯಾಗಿ ಮಾಡಿದ್ದಾರೆ. ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ. ಈ ರೀತಿಯಾಗಿ ಯಾರೇ ಮಾಡಿದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಕೆಯ್ಯೂರು ಪಂಚಾಯಿತಿ ಅಧ್ಯಕ್ಷ ಶರತ್ಕುಮಾರ್ ಎಚ್ಚರಿಕೆ ನೀಡಿದ್ದಾರೆ.



