ಕುಂದಾಪುರ ಜನವರಿ 05: ಅಂಪಾರು ಸಹಕಾರಿ ವ್ಯವಸಾಯಿತ ಸಂಘ ದಲ್ಲಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ವ್ಯಕ್ತಿಯೊಬ್ಬರು ಸಂಘದಲ್ಲಿ ನಕಲಿ ಖಾತೆಗಳನ್ನು ಸಷ್ಠಿಸಿ ಸಂಘದ 3 ಕೋಟಿಗೂ ಅಧಿಕ ಹಣವನ್ನು ಬಳಸಿಕೊಂಡು ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2023-2024 ನೇ ಸಾಲಿನಲ್ಲಿ ಅಂಪಾರು ಸಹಕಾರಿ ವ್ಯವಸಾಯಿಕ ಸಂಘ (ನಿ) ಅಂಪಾರು ಇಲ್ಲಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸದಾಶಿವ ವೈದ್ಯ ಎಂಬ ವ್ಯಕ್ತಿಯ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-ಸುಳ್ಯ -ಮಗುವಿನ ಜೊತೆಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ತಾಯಿ…!!
ದೂರಿನ ಪ್ರಕಾರ ಆರೋಪಿ ಸದಾಶಿವ ವೈದ್ಯ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬಡ್ಡಿ ಖಾತೆಗೆ ನಕಲಿ ಖರ್ಚು ಬರೆದು, ನಕಲಿ ಠೇವಣಿ ಸೃಷ್ಟಿಸಿ, ಉಳಿತಾಯ ಖಾತೆಯಲ್ಲಿ ಅವ್ಯವಹಾರ ಮಾಡಿ ಒಟ್ಟು 3,95,65,000/- ರೂ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಹಣಕ್ಕೆ ಸಂಬಂಧಿಸಿದಂತೆ ಹೊಂದಾಣಿಕೆ ಲೆಕ್ಕಗಳು ಸಂಘದ ಕಂಪ್ಯೂಟರ್ ನಲ್ಲಿರುವ ದಾಖಲೆಗಳಲ್ಲಿ “ವೈದ್ಯ” ಹಾಗೂ “ಮೇನೆಜರ್” ಎನ್ನುವ ಪಾಸ್ ವರ್ಡ್ ಮೂಲಕ ದಾಖಲಾಗಿದ್ದು ಅವುಗಳನ್ನು ಆರೋಪಿಯು ಬಳಸುತ್ತಿದ್ದು ಅಲ್ಲದೇ ನಕಲಿ ಠೇವಣಿ ಖಾತೆ, ಉಳಿತಾಯ ಖಾತೆ, ಸಾಲದ ಖಾತೆಗಳು ಆರೋಪಿತನ ಸಂಬಂಧಿಕರಿಗೆ ಸೇರಿದ ಖಾತೆಯ ಮೂಲಕ ಸಂಘದ ಹಣ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಘದ ನಿರಖು ಠೇವಣಿ ಪರಿಶೀಲನೆ ವೇಳೆ ಈ ವಂಚನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ-ಉಡುಪಿ – ಷೇರು ಮಾರಕಟ್ಟೆಯ ನಕಲಿ ವಾಟ್ಸಪ್ ಗ್ರೂಪ್ ನಂಬಿ 30 ಲಕ್ಷ ಕಳೆದುಕೊಂಡ ವೃದ್ದ
ಸಂಘದ ಹಾಲಿ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ ಕುಮಾರ್ ಶೆಟ್ಟಿ ಅವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಸದಾಶಿವ ವೈದ್ಯ ಎಂಬಾತ ಸಂಸ್ಥೆ ಮತ್ತು ಗ್ರಾಹಕರಿಗೆ ವಂಚನೆ ಮಾಡುವ ಉದ್ದೇಶದಿಂದ ನಕಲಿ ಪಾಸ್ ವರ್ಡ್ ಸೃಷ್ಟಿಸಿ ಒಟ್ಟು 3,95,65,000/-ರೂ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡು ದುರುಪಯೋಗ ಮಾಡಿರುತ್ತಾನೆ ಎಂದು ದೂರು ನೀಡಿದ್ದಾರೆ.
. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 01/2026 ಕಲಂ 314, 228, 316(4), 316(5), 319(1), 319(2), 318(2), 318(3), 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.



