ಮಂಗಳೂರು ಮಾರ್ಚ್ 15: ಕೇರಳ ಲಾಭಿಗೆ ಮತ್ತೆ ರೈಲ್ವೆ ಇಲಾಖೆ ಮಣಿದಿದ್ದು, ಬೆಂಗಳೂರಿನಿಂದ ಕಣ್ಣೂರು ನಡುವೆ ಸಂಚರಿಸುತ್ತಿದ್ದ ದೈನಂದಿನ ಎಕ್ಸ್ಪ್ರೆಸ್ ರೈಲನ್ನು ಕೇರಳದ ಪ್ರಮುಖ ನಗರವಾದ ಕೋಯಿಕ್ಕೋಡ್ವರೆಗೆ ವಿಸ್ತರಿಸಿ ನೈರುತ್ಯ ರೈಲ್ವೆ ಆದೇಶ ಹೊರಡಿಸಿದೆ. ಈ ಹೊಸ ಸೇವೆಯು ಇಂದಿನಿಂದಲೇ (ಮಾರ್ಚ್ 15, 2026) ಜಾರಿಗೆ ಬಂದಿದೆ.

ರೈಲು 16511: ಕಣ್ಣೂರಿನಿಂದ ಬೆಳಿಗ್ಗೆ 11:00ಕ್ಕೆ ಹೊರಟು ತಲಶ್ಶೇರಿ (11:21), ವಡಕರ (11:42), ಕ್ವಿಲಾಂಡಿ (11:59) ಮೂಲಕ ಮಧ್ಯಾಹ್ನ 12:40ಕ್ಕೆ ಕೋಯಿಕ್ಕೋಡ್ ತಲುಪಲಿದೆ.
ರೈಲು 16512: ಕೋಯಿಕ್ಕೋಡ್ನಿಂದ ಮಧ್ಯಾಹ್ನ 3:30ಕ್ಕೆ ಹೊರಟು ಕ್ವಿಲಾಂಡಿ (4:13), ತಲಶ್ಶೇರಿ (4:35) ಮೂಲಕ ಸಂಜೆ 5:00ಕ್ಕೆ ಕಣ್ಣೂರು ತಲುಪಲಿದೆ. ಅಲ್ಲಿಂದ ಸಂಜೆ 5:05ಕ್ಕೆ ಎಂದಿನಂತೆ ಮಂಗಳೂರು ಮತ್ತು ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಲಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಸೀಟುಗಳ ಲಭ್ಯತೆಯ ಕೊರತೆಯ ನಡುವೆಯೂ ಕೇರಳಕ್ಕೆ ರೈಲನ್ನು ವಿಸ್ತರಿಸುತ್ತಿರುವುದು ಕರಾವಳಿಗರನ್ನು ಕೆರಳಿಸಿದೆ. ಈ ಹಿಂದೆ ಯಾವುದೇ ಕಾರಣಕ್ಕೂ ಈ ರೈಲನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಜಿಲ್ಲೆಯ ಸಂಸದರು ಹೇಳಿದ್ದರು. ಆದರೆ ಇದೀಗ ಕೇರಳ ಲಾಬಿ ಎದುರು ಕರ್ನಾಟಕ ಮಣಿದಿದೆ.
ಮಂಗಳೂರಿನಿಂದ ಕೋಝಿಕೋಡ್ಗೆ ರೈಲು ವಿಸ್ತರಿಸುವುದರಿಂದ ಕರಾವಳಿ ಪ್ರಯಾಣಿಕರಿಗೆ ಬರ್ತ್ ಲಭ್ಯತೆ ತೀವ್ರವಾಗಿ ಕುಸಿಯಲಿದೆ. ಈಗಾಗಲೇ ಕೇರಳಕ್ಕೆ ಹಲವಾರು ರೈಲುಗಳಿದ್ದರೂ, ಮಂಗಳೂರಿನ ಕೋಟಾದಡಿ ಕೇರಳಿಗರು ಟಿಕೆಟ್ ಪಡೆಯುತ್ತಿರುವುದು ಸಮಸ್ಯೆಯಾಗಿದೆ. 2009ರಲ್ಲಿ ಮಂಗಳೂರು ಸೆಂಟ್ರಲ್-ಯಶವಂತಪುರ ರೈಲನ್ನು ಆಗಿನ ರೈಲ್ವೆ ರಾಜ್ಯ ಸಚಿವ ಇ. ಅಹ್ಮದ್ ಕಣ್ಣೂರಿಗೆ ವಿಸ್ತರಿಸಿದ್ದರು. ಆ ಇತಿಹಾಸ ಈಗ ಮತ್ತೆ ಪುನರಾವರ್ತನೆಯಾಗುತ್ತಿದೆ ಎಂದು ಪ್ರಯಾಣಿಕರು ವ್ಯಂಗ್ಯವಾಡಿದ್ದಾರೆ. “ಮುಂದೆ ಈ ರೈಲನ್ನು ಕನ್ಯಾಕುಮಾರಿಯವರೆಗೂ ಕೊಂಡೊಯ್ದರೂ ಅಚ್ಚರಿಯಿಲ್ಲ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.