KARNATAKA
25 ಕೋಟಿ ಮೌಲ್ಯದ ಅಂಬರ್ ಗ್ರೀಸ್ ವಶಕ್ಕೆ: ಮೂವರು ಸೆರೆ..!
ಮೈಸೂರು, ಮೇ 23: ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ಮೂವರನ್ನು ಬಂಧಿಸಿದ್ದಾರೆ.
ಬಂಧತರಿಂದ 25 ಕೋಟಿ ರೂಪಾಯಿ ಮೌಲ್ಯದ ತಿಮಿಂಗಿಲ ವಾಂತಿ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಕೇರಳ ರಾಜ್ಯದ ಕೊಚ್ಚಿನ್ ಸಮುದ್ರದಿಂದ ಅಂಬರ್ ಗ್ರೀಸ್ ಸಂಗ್ರಹಿಸಿ ಮೈಸೂರಿನ ಹೆಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ಬಳಿ ತಂದು ಮಾರಾಟ ಮಾಡಲು ಯತ್ನಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಹೆಚ್.ಡಿ.ಕೋಟೆ ಹಾಗೂ ಜಿಲ್ಲಾ ಸೆನ್ (CEN) ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಕೇರಳ ಮೂಲದ ಇಬ್ಬರು ಹಡಗು ನಡೆಸುವ ನಾವಿಕರು ಸೇರಿದಂತೆ ಮೂವರನ್ನು ಸೆರೆ ಹಿಡಿದಿದ್ದಾರೆ.
ಆರೋಪಿಗಳು ಬಳಸಿದ್ದ ಒಂದು ಕಾರನ್ನು ಜಪ್ತಿ ಮಾಡಲಾಗಿದೆ. ವಿದೇಶದಲ್ಲಿ ಅಧಿಕ ಬೇಡಿಕೆ ಹೊಂದಿರುವ ಅಂಬರ್ ಗ್ರೀಸ್ ಸರಿಸುಮಾರು 25 ಕೋಟಿ ರೂ ಬೆಲೆಬಾಳುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
You must be logged in to post a comment Login