ಮಂಗಳೂರು ನವೆಂಬರ್ 03: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ಮಶಾನಗಳಲ್ಲಿ ಸಾವಿರಾರು ಜನ ಕ್ಯಾಂಡಲ್ ಇಟ್ಟು ಪೂಜೆ ನಡೆಸಿದ್ದಾರೆ. ಸ್ಮಶಾನದಲ್ಲಿರುವ ಗೋರಿಗಳನ್ನು ಸಿಂಗಾರ ಮಾಡಿ ಹೂವುಗಳನ್ನು ಇಟ್ಟು ಬಳಿಕ ಮೆಣದ ಬತ್ತಿ ಹಚ್ಚಿರುವ ದೃಶ್ಯ ರಾತ್ರಿ ವೇಳೆ ಕಂಡು ಬಂದಿದೆ.

ಕತ್ತಲಲ್ಲಿ ಹೊತ್ತಿಕೊಂಡ ದೀಪಗಳ ನಡುವೆ ಹೂವಿನಿಂದ ಅಲಂಕಾರಗೊಂಡ ಗೋರಿಗಳ ಮುಂದೆ ಕೈ ಮುಗಿದು ಮೃತರ ಆತ್ಮಕ್ಕೆ ಶಾಂತಿ ಕೋರುತ್ತಿರೋ ಜನರು. ಇದು ನಿನ್ನೆ ಗುರುವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಸ್ಮಶಾನಗಳಲ್ಲಿ ಕ್ರೈಸ್ತ ಸಮುದಾಯದವರು ನಡೆಸುವ ವಿಶೇಷ ಪೂಜೆಯ ದೃಶ್ಯ .ಹೌದು ಕ್ಯಾಥೋಲಿಕ್ ಕ್ರೈಸ್ತರಲ್ಲಿ ಈ ವಿಶೇಷ ಆಚರಣೆ ಇದ್ದು ಪ್ರತಿ ವರ್ಷ ನವೆಂಬರ್ ತಿಂಗಳ ಮೊದಲೆರಡು ದಿನಗಳಲ್ಲಿ ಈ ಆಚರಣೆ ನಡೆಯುತ್ತದೆ.

ಮೊದಲ ದಿನ ಸಂತ ಭಕ್ತರ ದಿನ ಎಂದು ಆಚರಿಸೋ ದಿನವನ್ನು ವಿಶ್ವದೆಲ್ಲೆಡೆ ಕ್ರೈಸ್ತರು ಭಕ್ತಿಯಿಂದ ಆಚರಿಸುತ್ತಾರೆ. ಎರಡನೇ ದಿನದಂದು ಮೃತರ ಗೋರಿಗಳನ್ನ ಶುಚಿಗೊಳಿಸಿ ಹೂವುಗಳಿಂದ ಅಲಂಕಾರ ಮಾಡಿ ಮೃತರಿಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಸೂರ್ಯಾಸ್ತದ ಬಳಿಕ ನಡೆಯುವ ಈ ವಿಶೇಷ ಪೂಜೆಯಲ್ಲಿ ಚರ್ಚ್ ಧರ್ಮಗುರುಗಳು ಸ್ಮಶಾನದ ಗೋರಿಗಳಿಗೆ ಪವಿತ್ರ ನೀರನ್ನು ಚುಮಿಕಿಸಿ ಮೃತರ ಸದ್ಗತಿಗೆ ಪ್ರಾರ್ಥಿಸುತ್ತಾರೆ .

ಕ್ರೈಸ್ತ ಸಮುದಾಯದಲ್ಲಿ ಮೃತರು ಹಾಗೂ ಮೃತರ ಸಮಾಧಿಗಳು ಅಂದ್ರೆ ಅತ್ಯಂತ ಶ್ರದ್ಧೆಯ ಭಾವನೆ ಇದ್ದು ಸಮಾಧಿಗಳು ಅತ್ಯಂತ ಪವಿತ್ರ ಎಂದು ನಂಬಿಕೆ ಇಟ್ಟಿರುತ್ತಾರೆ. ಹೀಗಾಗಿ ಈ ರೀತಿಯ ಗೋರಿ ಪೂಜೆಯ ಮೂಲಕ ಮೃತರಿಗೆ ಗೌರವ ಸಲ್ಲಿಸುವುದರೊಂದಿಗೆ ಅವರ ಸದ್ಗತಿಗೆ ಪ್ರಾರ್ಥಿಸಲಾಗುತ್ತದೆ. ಈ ನಂಬಿಕೆ ಅನಾದಿಕಾಲದಿಂದ ಬೆಳೆದು ಬಂದಿದ್ದು, ಕೇವಲ ತಮ್ಮ ಸಂಬಂಧಿಗಳ ಗೋರಿಗಷ್ಟೇ ಅಲ್ಲದೆ ಅನಾಥ ಗೋರಿಗಳಿಗೂ ಇಲ್ಲಿ ಪೂಜೆ ನಡೆಯುತ್ತದೆ. ತಮ್ಮವರಿಗಾಗಿ ಪ್ರಾರ್ಥಿಸಲು ಬರುವ ಚರ್ಚ್ನ ಎಲ್ಲಾ ಭಕ್ತರು ಸ್ಮಶಾನದ ಎಲ್ಲಾ ಗೋರಿಗಳಿಗೂ ಪೂಜೆ ಸಲ್ಲಿಸುವ ಮೂಲಕ ಮೃತರೆಲ್ಲರೂ ಸಂತ ಭಕ್ತರು ಎಂದು ಗೌರವಿಸ್ತಾರೆ.
ಮೃತರ ಸದ್ಗತಿಗಾಗಿ ಪ್ರಾರ್ಥನೆಯೊಂದಿಗೆ ಗೋರಿಗೆ ಪೂಜೆ ನಡೆಸುವ ಕ್ರೈಸ್ತರು ಬಳಿಕ ತಮ್ಮ ಮನೆಯಲ್ಲಿ ಮೃತರಿಗೆ ಇಷ್ಟವಾದ ತಿಂಡಿಗಳನ್ನು ಬಡಿಸುವ ಕ್ರಮ ಕೂಡಾ ಇದೆ. ಸಾಮಾನ್ಯವಾಗಿ ಎಲ್ಲಾ ಧರ್ಮಗಳಲ್ಲೂ ಮೃತರಿಗೆ ಗೌರವ ಸಲ್ಲಿಸುವ ಕ್ರಮ ಇದೆಯಾದ್ರೂ ಈ ರೀತಿ ಸ್ಮಶಾನಕ್ಕೆ ತೆರಳಿ ಮೃತರ ಸದ್ಗತಿಗೆ ಪ್ರಾರ್ಥಿಸೋ ಕ್ರೈಸ್ತರ ಈ ಸಂಪ್ರದಾಯ ವಿಶೇಷವೇ ಸರಿ.



