ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದ ಫಿಲಡೆಲ್ಫಿಯಾ ನಗರದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಅಕ್ಕ’ (AKKA) ವಿಶ್ವ ಕನ್ನಡ ಸಮ್ಮೇಳನದ ರಜತ ಮಹೋತ್ಸವಕ್ಕೆ (Silver Jubilee), ಸ್ಯಾಂಡಲ್ವುಡ್ನ ಖ್ಯಾತ ನಟ, ನಿರ್ದೇಶಕ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಅವರನ್ನು ‘ಸಾಂಸ್ಕೃತಿಕ ರಾಯಭಾರಿ’ಯನ್ನಾಗಿ ಅಧಿಕೃತವಾಗಿ ನೇಮಕ ಮಾಡಲಾಗಿದೆ.

ಉತ್ತರ ಅಮೆರಿಕದ ಕನ್ನಡ ಕೂಟಗಳ ಒಕ್ಕೂಟವು (Association of Kannada Kootas of America) ತನ್ನ ಸ್ಥಾಪನೆಯ 25ನೇ ವರ್ಷದ ಸ್ಮರಣಾರ್ಥವಾಗಿ, ಬರುವ ಸೆಪ್ಟೆಂಬರ್ 4, 5 ಮತ್ತು 6, 2026 ರಂದು ಬೃಹತ್ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಿದೆ. ಈ ಐತಿಹಾಸಿಕ ಸಮ್ಮೇಳನದ ಮೆರುಗನ್ನು ಹೆಚ್ಚಿಸಲು ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಅವರ ಉಪಸ್ಥಿತಿಯು ಮಹತ್ವದ ಪಾತ್ರ ವಹಿಸಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
‘ಕಾಂತಾರ’ ಚಿತ್ರದ ಮೂಲಕ ಕರಾವಳಿಯ ಮಣ್ಣಿನ ಸಂಸ್ಕೃತಿ ಹಾಗೂ ದೈವಾರಾಧನೆಯನ್ನು ಜಗತ್ತಿನಾದ್ಯಂತ ಪಸರಿಸಿದ ರಿಷಬ್ ಶೆಟ್ಟಿ, ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿನಿಧಿಸಲಿದ್ದಾರೆ. ಅನಿವಾಸಿ ಕನ್ನಡಿಗರನ್ನು ಒಗ್ಗೂಡಿಸುವ ಹಾಗೂ ಯುವ ಪೀಳಿಗೆಯಲ್ಲಿ ಕನ್ನಡ ಭಾಷೆ ಮತ್ತು ಕಲೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ನೇಮಕ ಮಾಡಲಾಗಿದೆ .
ಈ ಬೃಹತ್ ಸಮಾವೇಶದಲ್ಲಿ ಕರ್ನಾಟಕದ ಗಣ್ಯರು, ಕಲಾವಿದರು ಹಾಗೂ ಜಗತ್ತಿನಾದ್ಯಂತ ಇರುವ ಸಾವಿರಾರು ಕನ್ನಡಿಗರು ಭಾಗವಹಿಸಲಿದ್ದು, ರಿಷಬ್ ಶೆಟ್ಟಿ ಅವರ ನೇಮಕವು ಅಭಿಮಾನಿಗಳಲ್ಲಿ ಮತ್ತು ಅನಿವಾಸಿ ಕನ್ನಡಿಗರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.