ಆಗ್ರಾ: ಚಿತ್ರಕಥೆಯನ್ನೂ ಮೀರಿಸುವಂತಹ ಭೀಕರ ಹಾಗೂ ರೋಚಕ ಕೊಲೆ ಪ್ರಕರಣವೊಂದು ಆಗ್ರಾದ ಸಿಕಂದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಕುಡುಕ ಪತಿಯ ಕಾಟಕ್ಕೆ ಬೇಸತ್ತ ಮಹಿಳೆಯೊಬ್ಬಳು, ಆತನಿಗೆ ಖೀರ್ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಲೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ಶವವನ್ನು ಮನೆಯ ಬಾತ್ರೂಮ್ನಲ್ಲೇ ಹೂತುಹಾಕಿ, ಯಾರೂ ಅನುಮಾನಿಸದಂತೆ ದಿನನಿತ್ಯ ಅದೇ ಬಾತ್ರೂಮ್ನಲ್ಲಿ ಸ್ನಾನ ಮಾಡುತ್ತಾ 45 ದಿನಗಳ ಕಾಲ ಹೈಡ್ರಾಮಾ ನಡೆಸಿದ್ದಾಳೆ!

ದಹತೋರಾ ರೇಣುಕಾಧಾಮ್ ಕಾಲೋನಿಯಲ್ಲಿ ನಡೆದ ಈ ಘಟನೆ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಸುರೇಂದ್ರ ಕುಮಾರ್ ಶರ್ಮಾ (46) ಕೊಲೆಯಾದ ದುರ್ದೈವಿ. ಈತನ ಪತ್ನಿ ರೂಬಿಯೇ ಕೊಲೆಗಡುಕಿ.
ಪೊಲೀಸ್ ವಿಚಾರಣೆ ವೇಳೆ ರೂಬಿ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಪತಿ ಸುರೇಂದ್ರ ತೀವ್ರ ಮದ್ಯದ ಚಟಕ್ಕೆ ಬಿದ್ದಿದ್ದ, ಜೊತೆಗೆ ನಶೆಗಾಗಿ ನಿದ್ದೆ ಮಾತ್ರೆಗಳನ್ನು ಬಳಸುತ್ತಿದ್ದ. ಇದರಿಂದ ಸಂಸಾರ ನರಕವಾಗಿತ್ತು. ಇದ್ರಿಂದ ಮುಕ್ತಿ ಪಡೆಯಲು ರೂಬಿ ‘ಕ್ರೈಮ್ ಪೆಟ್ರೋಲ್’ ಹಾಗೂ ‘ದೃಶ್ಯಂ’ ಸಿನಿಮಾ ನೋಡಿ ಸ್ಕೆಚ್ ಹಾಕಿದ್ದಳು. ಮೇ 18 ರಂದು ರಾತ್ರಿ ಪತಿಗೆ ಪ್ರೀತಿಯಿಂದ ಖೀರ್ ಮಾಡಿ, ಅದರಲ್ಲಿ ಬರೋಬ್ಬರಿ 16 ರಿಂದ 20 ನಿದ್ದೆ ಮಾತ್ರೆಗಳನ್ನು ಬೆರೆಸಿ ತಿನ್ನಿಸಿದ್ದಳು. ಒಮ್ಮೆಗೆ ಅತಿ ಹೆಚ್ಚು ಡೋಸ್ ತಿಂದಿದ್ದರಿಂದ ಸುರೇಂದ್ರ ಮೃತಪಟ್ಟಿದ್ದ. ತದನಂತರ ಶವವನ್ನು ಬಾತ್ರೂಮ್ಗೆ ಎಳೆದೊಯ್ದು, ನೆಲ ಅಗೆದು ಹೂತುಹಾಕಿದ್ದಳು. ಯಾರಿಗೂ ಡೌಟ್ ಬರಬಾರದು ಎಂದು ಮರುದಿನವೇ ಮೇಸ್ತ್ರಿಯನ್ನು ಕರೆಸಿ ಅದರ ಮೇಲೆ ಕಲ್ಲು-ಮಣ್ಣು ಹಾಕಿ ಹೊಸದಾಗಿ ಟೈಲ್ಸ್ ಹಾಕಿಸಿದ್ದಳು! ಯಾರೇ ಕೇಳಿದ್ರೂ ಗಂಡ ಕಾಣೆಯಾಗಿದ್ದಾನೆ ಅಂತ ಕಣ್ಣೀರಿಡುತ್ತಿದ್ದಳು.
ಸುರೇಂದ್ರ ಅವರ ತಾಯಿ ಕಮಲಾ ಅವರಿಗೆ ಮಾಸಿಕ ₹30,000 ಪೆನ್ಷನ್ ಬರುತ್ತಿತ್ತು. ಇದರ ಪಾಸ್ಬುಕ್ ಹಾಗೂ ಡೆಬಿಟ್ ಕಾರ್ಡ್ ರೂಬಿ ಬಳಿಯೇ ಇತ್ತು. ಆದರೆ ಈಕೆ ಸುರೇಂದ್ರನ ಅಣ್ಣ ಅನಿಲ್ ಶರ್ಮಾ ಅವರಿಗೆ ಕೇವಲ ₹10,000 ಮಾತ್ರ ಕೊಟ್ಟು ಉಳಿದ ಹಣ ತಾನೇ ಎಗರಿಸುತ್ತಿದ್ದಳು. ಅನುಮಾನಗೊಂಡ ಅನಿಲ್, ತಾಯಿಯನ್ನು ಭರತಪುರದ ಬ್ಯಾಂಕ್ಗೆ ಕರೆದೊಯ್ದು ಚೆಕ್ ಮಾಡಿದಾಗ ಪೆನ್ಷನ್ ಹಣ ಈಗಾಗಲೇ ಡ್ರಾ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ಗುರುವಾರ ಅನಿಲ್ ರೂಬಿಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಇದರಿಂದ ಗಾಬರಿಗೊಂಡ ರೂಬಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಫೋನ್ ಮಾಡಿ, “ನಿಮ್ಮ ತಮ್ಮ ಮನೆಗೆ ಬಂದಿದ್ದಾರೆ, ಬಂದು ಮಾತನಾಡಿ” ಎಂದು ಅನಿಲ್ನನ್ನು ಕರೆಸಿದ್ದಾಳೆ. ಅನಿಲ್ ಮನೆಗೆ ಬಂದು “ತಮ್ಮ ಎಲ್ಲಿದ್ದಾನೆ?” ಎಂದು ಕೇಳಿದಾಗ, ರೂಬಿ ನಿಸ್ಸಂಕೋಚವಾಗಿ “ಅವನು ಬಾತ್ರೂಮ್ನಲ್ಲಿ 2 ಅಡಿ ಕೆಳಗಿದ್ದಾನೆ!” ಎಂದು ಹೇಳಿದ್ದಾಳೆ. ಇದನ್ನು ಕೇಳಿ ಬೆಚ್ಚಿಬಿದ್ದ ಅನಿಲ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
“ಬಾತ್ರೂಮ್ ನೆಲ ಅಗೆದು ಸುರೇಂದ್ರ ಅವರ ಮೃತದೇಹದ ಅವಶೇಷಗಳನ್ನು ಹೊರತೆಗೆಯಲಾಗಿದೆ. ವಶಪಡಿಸಿಕೊಂಡ ಮೂಳೆಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಲಾಗುವುದು. ಈ ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಆಳವಾದ ತನಿಖೆ ನಡೆಯುತ್ತಿದೆ” ಎಂದು ಡಿಸಿಪಿ ಸಿಟಿ ಸಯ್ಯದ್ ಅಲಿ ಅಬ್ಬಾಸ್ ತಿಳಿಸಿದ್ದಾರೆ. ಮೃತ ಸುರೇಂದ್ರ ಮತ್ತು ರೂಬಿಗೆ 16 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಹೆಣ್ಣುಮಕ್ಕಳಿದ್ದಾರೆ.