ಲಕ್ನೋ, ಮಾರ್ಚ್ 12: ರಸ್ತೆ ಗುಂಡಿಗಳಿಂದ ಜೀವಹಾನಿಯಾಗುವ ಸುದ್ದಿಯನ್ನು ಸಾಮಾನ್ಯವಾಗಿ ಓದಿರುತ್ತೀರ ಆದರೆ ವಿಲಕ್ಷಣ ಘಟನೆಯೊಂದರಲ್ಲಿ ಬ್ರೈನ್ ಡೆಡ್ ಎಂದು ಘೋಷಿಸಲಾಗಿದ್ದ, ಜೀವಂತ ಶವವಾಗಿ ಬದುಕಬೇಕಿದ್ದ ವ್ಯಕ್ತಿಯೊಬ್ಬರು ರಸ್ತೆ ಗುಂಡಿಯಿಂದಾಗಿ ಪುನರ್ಜನ್ಮ ಪಡೆದಿದ್ದಾರೆ. 
ಉತ್ತರ ಪ್ರದೇಶದ 50 ವರ್ಷದ ವಿನೀತಾ ಶುಕ್ಲಾ ಎಂಬ ಮಹಿಳೆ ಗಂಭೀರ ಆರೋಗ್ಯ ಸಮಸ್ಯೆಯಿಂದ ಮೆದುಳು ನಿಷ್ಕ್ರಿಯಕ್ಕೀಡಾಗಿದ್ದರು. ಅವರನ್ನು ಮೀರತ್ ನಗರ ಆಸ್ಪತ್ರೆಗೆ ದಾಖಲಿಸಿದ್ದಾಗ ವೈದ್ಯರು ಹಲವು ಪರೀಕ್ಷೆ ನಡೆಸಿ ‘ಬ್ರೈನ್ ಡೆಡ್’ ಅಂತ ವರದಿಯನ್ನೂ ಕೊಟ್ಟಿದ್ದರು. ಇದರಿಂದ ನೊಂದ ಪತಿ ಕುಲ್ದೀಪ್ ಕುಮಾರ್ ಶುಕ್ಲಾ ಪತ್ನಿಯನ್ನು ಫೆ. 24ರಂದು ಅಂಬುಲೆನ್ಸ್ನಲ್ಲಿ ಮನೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ, ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ 74ರಲ್ಲಿ ಅಂಬುಲೆನ್ಸ್ ವೇಗವಾಗಿ ಹೋಗುವಾಗ ರಸ್ತೆಯಲ್ಲಿದ್ದ ದೊಡ್ಡ ಗುಂಡಿಗೆ ಇಳಿದಿದೆ. ಈ ವೇಳೆ, ವಿನೀತಾ ಶುಕ್ಲಾ ದೇಹದಲ್ಲಿ ದೊಡ್ಡಮಟ್ಟದ ಸಂಚಲನ ಉಂಟಾಗಿದೆ. ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯ ದೇಹದಲ್ಲಿ ಚಲನೆ ಕಾಣಿಸಿಕೊಂಡಿದೆ.
ಕೂಡಲೇ ಎಚ್ಚೆತ್ತುಕೊಂಡ ಮಹಿಳೆಯ ಕುಟುಂಬದವರು ವಾಪಸ್ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿನ ವೈದ್ಯರಿಗೆ ಎಲ್ಲಾ ವಿದ್ಯಮಾನವನ್ನು ವಿವರಿಸಿದ್ದಾರೆ. ವೈದ್ಯರು ಕೂಡಲೇ ಚಿಕಿತ್ಸೆಯನ್ನು ನೀಡಿದ ನಂತರ, ಸಾವಿನ ಅಂಚಿನಲ್ಲಿದ್ದ ವಿನೀತಾ ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಸದ್ಯ ಈ ಸುದ್ದಿ ದೇಶಾದ್ಯಂತ ವೈರಲ್ ಆಗಿದೆ.