ಬೆಂಗಳೂರು, ಏಪ್ರಿಲ್ 22: ನಗರದ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‘ಕಸ ಹಾಕಿ ಬರ್ತೀನಿ’ ಎಂದು ಕಸದ ಬುಟ್ಟಿ ಹಿಡಿದು ಮನೆಯಿಂದ ಹೊರಬಂದ ಮಹಿಳೆಯೊಬ್ಬಳು, ತನ್ನ ಪ್ರಿಯಕರನ ಜೊತೆ ಎಸ್ಕೇಪ್ ಆಗಿರುವ ಘಟನೆ ಬೆಳಕಿಗೆ ಬಂದಿದೆ. ನಾಪತ್ತೆಯಾದ ಮಹಿಳೆಯನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಶರತ್ ಅವರು ಪ್ರಭು ಎಂಬಾತನ ವಿರುದ್ಧ ಬಾಗಲಗುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?
ಶರತ್ ಹಾಗೂ ಪ್ರಿಯಾಂಕಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಬಾಗಲಗುಂಟೆ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇದೇ ಏರಿಯಾದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಪ್ರಭು ಎಂಬ ಪರಿಚಿತ ವ್ಯಕ್ತಿಯ ಜೊತೆ ಪ್ರಿಯಾಂಕಾಗೆ ಸಲುಗೆ ಬೆಳೆದಿತ್ತು. ಗಂಡ ಶರತ್ ಪ್ರತಿದಿನ ಕೆಲಸಕ್ಕೆ ಹೋದ ಸಮಯದಲ್ಲಿ ಪ್ರಿಯಾಂಕಾ ಮತ್ತು ಪ್ರಭು ಗುಟ್ಟಾಗಿ ಭೇಟಿಯಾಗುತ್ತಿದ್ದರು. ಪ್ರೇಯಸಿಯ ಮೇಲಿನ ಪ್ರೀತಿಯಿಂದ ಪ್ರಿಯಕರ ಪ್ರಭು, ಪ್ರಿಯಾಂಕಾಳ ಮೊಬೈಲ್ಗೆ ಆಗಾಗ ರಿಚಾರ್ಜ್ ಹಾಕುತ್ತಿದ್ದ. ಈ ವಿಚಾರ ಗಂಡನಿಗೆ ತಿಳಿದು, ದಂಪತಿ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತು. ಈ ವೇಳೆ ಪತ್ನಿ ಪ್ರಿಯಾಂಕಾಗೆ ಶರತ್ ಬುದ್ಧಿವಾದವನ್ನೂ ಹೇಳಿದ್ದರು.
ನಿದ್ರೆ ಮಾತ್ರೆ ಬೆರೆಸಿದ ಪತ್ನಿ
ಗಂಡ ಎಷ್ಟೇ ಬುದ್ಧಿವಾದ ಹೇಳಿದರೂ ಕೇಳದ ಪ್ರಿಯಾಂಕಾ, ಏಪ್ರಿಲ್ 11ರಂದು ಗಂಡ ಮನೆಯಲ್ಲಿರುವಾಗಲೇ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಲಾಗಿದೆ. ಅಂದು ರಾತ್ರಿ ಗಂಡ ಶರತ್ ಅವರ ಊಟದಲ್ಲಿ ಪ್ರಿಯಾಂಕಾ ನಿದ್ದೆ ಮಾತ್ರೆ ಬೆರೆಸಿ ಕೊಟ್ಟಿದ್ದಳು ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಗಂಡ ಗಾಢ ನಿದ್ರೆಗೆ ಜಾರುತ್ತಿದ್ದಂತೆ, ಏಪ್ರಿಲ್ 11ರ ರಾತ್ರಿ 11.57ರ ಸುಮಾರಿಗೆ ಮನೆಯಿಂದ ಹೊರಬಿದ್ದಿದ್ದಾಳೆ. ಯಾರಾದರೂ ನೋಡಿದರೆ ಅನುಮಾನ ಬರಬಾರದು ಎಂದು ಒಂದು ಕೈಯಲ್ಲಿ ಕಸದ ಬಕೆಟ್ ಹಾಗೂ ಮತ್ತೊಂದು ಕೈಯಲ್ಲಿ ಬಟ್ಟೆಗಳಿದ್ದ ಬ್ಯಾಗ್ ಹಿಡಿದುಕೊಂಡು ಏಕಾಏಕಿ ಪ್ರಿಯಕರ ಪ್ರಭು ಜೊತೆ ಎಸ್ಕೇಪ್ ಆಗಿದ್ದಾಳೆ ಎಂದು ಪತಿ ಶರತ್ ದೂರಿದ್ದಾರೆ.ಕೊಡಗು: ಹೋಂಸ್ಟೇನಲ್ಲಿ ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರ ಬಂಧನ
ಸದ್ಯ ಪತ್ನಿಯ ಈ ಕೃತ್ಯದಿಂದ ಕಂಗಾಲಾಗಿರುವ ಪತಿ ಶರತ್, ಬಾಗಲಗುಂಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪ್ರಭು ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿರುವ ಪ್ರಿಯಾಂಕಾ ಹಾಗೂ ಪ್ರಭುವಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.