ಮಂಗಳೂರು – ಮಕ್ಕಳ ಕಳ್ಳರಿದ್ದಾರೆ ಎಂಬ ವಾಟ್ಸಾಪ್ ಮೆಸೇಜ್ ಕುರಿತಂತೆ ಪೊಲೀಸ್ ಇಲಾಖೆಯಿಂದ ಸ್ಪಷ್ಟನೆ
27/02/2026
ಮಂಗಳೂರು ಫೆಬ್ರವರಿ 27: ವಾಟ್ಸಪ್ ನಲ್ಲಿ ಮಕ್ಕಳನ್ನು ಅಪಹರಣ ಮಾಡಲಾಗುತ್ತಿದೆ ಮತ್ತು ಅಪಹರಣ ಮಾಡುವವರು ಈ ಪರಿಸರದಲ್ಲಿದ್ದಾರೆ ಎಂಬ ಸಂದೇಶ ಹರಿದಾಡಿದ್ದು ಇದರ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದು, ಅದು ಸುಳ್ಳು ಸಂದೇಶವಾಗಿದ್ದು, ಕೇವಲ ವದಂತಿ ಎಂದು ಹೇಳಿದ್ದಾರೆ.
ಗುರುವಾರ ಸಂಜೆ ಕುಂಟಿಕಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೊಬ್ಬ ಅಲ್ಲಿದ್ದ ಆಟೋವೊಂದರಲ್ಲಿ ಮಕ್ಕಳು ಅಳುತ್ತಿರುವುದನ್ನು ಕೇಳಿಸಿಕೊಂಡು ತನ್ನ ಸ್ನೇಹಿತನಿಗೆ ಮಕ್ಕಳ ಕಳ್ಳರು ಬಂದಿದ್ದಾರೆ. ಮಕ್ಕಳನ್ನು ಕಿಡ್ನಾಪ್ ಮಾಡುತ್ತಿದ್ದಾರೆ ಎಂದು ಹೇಳಿದ್ದ. ಬಾಲಕನ ಸ್ನೇಹಿತ ತನ್ನ ಪರಿಚಯದ ಮಹಿಳೆಗೆ ಅದನ್ನು ಹೇಳಿದ. ಆಕೆ ವಾಟ್ಸ್ಆ್ಯಪ್ನಲ್ಲಿ ಈ ಬಗ್ಗೆ ವಾಯ್ಸ್ ಮೆಸೇಜ್ ಹಾಕಿದರು. ಅಲ್ಲದೆ ಅದನ್ನು ಕೇಳಿದ ಅಂಗನವಾಡಿ ಶಿಕ್ಷಕಿಯೊಬ್ಬರೂ ಕೂಡ ಎಲ್ಲರೂ ಎಚ್ಚರದಿಂದ ಇರುವಂತೆ ವಾಯ್ಸ್ ಮೆಸೇಜ್ ಹಾಕಿದ್ದರು. ಇದು ಎಲ್ಲಾ ಗ್ರೂಪ್ಗಳಲ್ಲಿ ಹರಿದಾಡಿದ ಪರಿಣಾಮ ಸ್ಥಳೀಯ ಜನರು ಗಾಬರಿಗೊಳಾಗಿದ್ದರು. ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಪೊಲೀಸರು ಹುಡುಗನನ್ನು ವಿಚಾರಣೆ ನಡೆಸಿ ಬಳಿಕ ಇದೊಂದು ವದಂತಿ ಎಂದಿದ್ದಾರೆ.
ಈ ನಿಟ್ಟಿನಲ್ಲಿ ತನಿಖೆ ನಡೆಸಿದ ಪೊಲೀಸರು ವಾಟ್ಸ್ಆ್ಯಪ್ನಲ್ಲಿ ಹರಿದಾಡುವ ಸಂದೇಶಗಳು ಸಂಪೂರ್ಣ ಸುಳ್ಳಾಗಿದೆ. ಯಾರೂ ಗಾಬರಿಗೆ ಒಳಗಾಗಬೇಡಿ ಎಂದು ಎಲ್ಲಾ ರೀತಿಯ ವದಂತಿಗೆ ತೆರೆ ಎಳೆದಿದ್ದಾರೆ.