DAKSHINA KANNADA
ಹೆತ್ತ ಮಗುವನ್ನೇ ಬಾವಿಗೆ ಎಸೆದು ಕೊಂದ ತಾಯಿ
ಸುಬ್ರಹ್ಮಣ್ಯ, ಅಕ್ಟೋಬರ್ 29 : ಹೆತ್ತ ತಾಯಿಯೇ ತನ್ನ ಹನ್ನೊಂದು ದಿನಗಳ ಪುಟ್ಟ ಹಸುಳೆಯನ್ನು ತಾನೇ ಕೈಯ್ಯಾರೆ ಬಾವಿಗೆ ಎಸೆದು ಕೊಲೆ ಮಾಡಿದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೂತ್ಕುಂಜ ಗ್ರಾಮದ ಬಸ್ತಿಕಾಡು ಎಂಬಲ್ಲಿ ನಡೆದಿದೆ.
ಬಸ್ತಿಕಾಡು ನಿವಾಸಿ ಮಣಿಕಂಠ ಎಂಬವರ ಪತ್ನಿ ಪವಿತ್ರಾ ಎಂಬಾಕೆಯೇ ತನ್ನ ಹಸುಳೆಯನ್ನು ಮನೆಯ ಎದುರಿನ ಬಾವಿಗೆ ಎಸೆದು ಕೊಲೆ ಮಾಡಿರುವ ಆರೋಪಿ. ಹೆಣ್ಣು ಮಗುವಿಗಾಗಿ ಹಂಬಲಿಸುತ್ತಿದ್ದ ಪವಿತ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಹುಟ್ಟಿದಾಗಿನಿಂದಲೂ ಅದರ ಬಗ್ಗೆ ತೀವ್ರ ಅಸಡ್ಡೆ ತಾಳಿದ್ದ ಪವಿತ್ರಾ ಕೊನೆಗೂ ಶನಿವಾರ ಸಂಜೆ ಮೂರೂಕಾಲು ಗಂಟೆಯ ಹೊತ್ತಿಗೆ ಮಗುವನ್ನು ಎತ್ತಿಕೊಂಡು ಹೊರಗೆ ಬಂದು ಬಾವಿಗೆ ಎಸೆದಿದ್ದಾರೆ.
ಶನಿವಾರ ಸಂಜೆ ಸುಮಾರು 3-15 ಗಂಟೆಯ ಸಮಯಕ್ಕೆ ಮಗುವನ್ನು ಎತ್ತಿಕೊಂಡು ಹೊರಗೆ ಬಂದಾಗ ಆಕೆಯ ಗಂಡನ ಸಹೋದರಿ ರಂಜಿತಾ ಎಂಬವರು ಅಂಗಳದಲ್ಲಿ ನಿಂತು ನೋಡಿಕೊಂಡಿದ್ದು, ಆಗ ಅವಳು ನನಗೆ ಇಷ್ಟವಿಲ್ಲದ ಈ ಮಗು ಬೇಡ, ಇದನ್ನು ಕೊಲ್ಲುತ್ತೇನೆ ಎಂದು ಹೇಳಿ ಮನೆಯ ಎದುರಿನ ಬಾವಿಗೆ ಎಸೆದಿದ್ದಾಳೆ.
ಕೂಡಲೇ ರಂಜಿತಾ ಗಂಡನಿಗೆ ದೂರವಾಣಿ ಕರೆ ಮಾಡಿದ್ದು ಅವರು ಮತ್ತು ಅವರ ಸ್ನೇಹಿತರಾದ ಪ್ರಕಾಶ್ , ಚೇತನ್ , ಮತ್ತು ಇತರರೊಂದಿಗೆ ಬಂದು ಬಾವಿಗೆ ಇಳಿದು, ಮಗುವನ್ನು ತೆಗೆದು ಮೇಲಕ್ಕೆ ಎತ್ತಿ ತಂದು ಒಂದು ಕಾರಿನಲ್ಲಿ ಪಂಜ ಸರಕಾರಿ ಆಸ್ಪತ್ರಗೆ ಕರೆದುಕೊಂಡು ಹೋದರು. ಅಷ್ಟರಲ್ಲಿ ಮಗು ಅಸು ನೀಗಿತ್ತು. ಮಗುವನ್ನು ಬಾವಿಗೆ ಎಸೆದ ಪವಿತ್ರಾಳ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login