LATEST NEWS
ಮರವಂತೆ ಸಮುದ್ರಕ್ಕೆ ಉರುಳಿದ ಕಾರು- ಓರ್ವ ಸಾವು, ಇನ್ನೋರ್ವ ನಾಪತ್ತೆ
ಉಡುಪಿ, ಜುಲೈ 03: ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಸಮುದ್ರಕ್ಕೆ ಕಾರೊಂದು ಉರುಳಿ ಬಿದ್ದು, ಓರ್ವ ಮೃತಪಟ್ಟಿದ್ದು, ಇನ್ನೋರ್ವನಿಗಾಗಿ ಹುಡುಕಾಟ ನಡೆಯುತ್ತಿರುವ ಘಟನೆ ನಡೆದಿದೆ.
ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿ ಮೇಲಿನಿಂದ ಕಳೆದ ರಾತ್ರಿ ಕಾರು ಸಮುದ್ರಕ್ಕೆ ಬಿದ್ದಿದೆ. ಆ ಕಾರಿನಲ್ಲಿ ನಾಲ್ವರಿದ್ದರು. ಓರ್ವ ಕಾರಿನೊಳಗೆ ಸಾವನ್ನಪ್ಪಿದ್ದು, ಮತ್ತೊಬ್ಬರು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಆತನಿಗಾಗಿ ಅಗ್ನಿಶಾಮಕದಳ, ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ. ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರದ ಕೋಟೇಶ್ವರ ಬಳಿಯಿಂದ ಬೈಂದೂರು ಕಡೆಗೆ ಕಾರು ತೆರಳುತ್ತಿತ್ತು. ಕಾರಿನೊಳಗೆ ವೀರಜ್ ಆಚಾರ್ಯ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ ಆಗಮಿಸಿ, ಕಾರನ್ನು ಮೇಲಕ್ಕೆತ್ತುವ ಕಾರ್ಯಚರಣೆ ಕೈಗೊಂಡಿದ್ದಾರೆ.
ಗಂಗೊಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಾಳಿ ಮಳೆಗೆ ರಸ್ತೆ ಕಾಣದೆ ಕಾರು ಸಮುದ್ರಕ್ಕೆ ಇಳಿದಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯ ಮೀನುಗಾರರ ಸಹಾಯದಿಂದ ಕಣ್ಮರೆಯಾದ ಯುವಕನನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ.
You must be logged in to post a comment Login