ಹೈದರಾಬಾದ್, ಏಪ್ರಿಲ್ 03: ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ನವವಿವಾಹಿತ ಸಾಫ್ಟ್ವೇರ್ ಎಂಜಿನಿಯರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೈದರಾಬಾದ್ನ ಮಿಯಾಪುರ್ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಯಾಪುರ್ ಪೊಲೀಸರು ಮೃತಳ ಪತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಮೂಲತಃ ಬಿಹಾರದವರಾದ ಇಶಿತಾ ಯಾದವ್ (26) ಮತ್ತು ಮಧ್ಯಪ್ರದೇಶದ ನೀರಜ್ ಭನ್ಸಾಲ್ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ಇವರು, ಪೋಷಕರ ಸಮ್ಮತಿಯೊಂದಿಗೆ ಇದೇ ವರ್ಷದ ಫೆಬ್ರವರಿ 20, 2026 ರಂದು ಪಾಟ್ನಾದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಮದುವೆಯ ನಂತರ ದಂಪತಿ ಹೈದರಾಬಾದ್ನ ಮಿಯಾಪುರ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದರು.
ಮದುವೆಯಾದ ಕೆಲವೇ ದಿನಗಳಲ್ಲಿ ನೀರಜ್ ತನ್ನ ಸ್ಟಾರ್ಟ್-ಅಪ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವಂತೆ ಇಶಿತಾ ಪೋಷಕರಿಂದ ಹೆಚ್ಚುವರಿ ಹಣ ತರಲು ಪತ್ನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲು ಆರಂಭಿಸಿದ್ದ ಎನ್ನಲಾಗಿದೆ. ಈ ಕಿರುಕುಳಕ್ಕೆ ಬೇಸತ್ತ ಇಶಿತಾ, ಏಪ್ರಿಲ್ 01, 2026 ರ ಬುಧವಾರ ಸಂಜೆ ಮನೆಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಶಿತಾ ಪೋಷಕರು ನೀಡಿದ ದೂರಿನನ್ವಯ ಪೊಲೀಸರು ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏಪ್ರಿಲ್ 02, 2026 ರಂದು ಆರೋಪಿ ನೀರಜ್ ಭನ್ಸಾಲ್ನನ್ನು ವಶಕ್ಕೆ ಪಡೆದಿರುವ ಪೊಲೀಸರು, ಆತನ ಮೊಬೈಲ್ ಫೋನ್ ಮತ್ತು ಚಾಟ್ ಸಂಭಾಷಣೆಗಳನ್ನು ವಶಪಡಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.