ಬೆಂಗಳೂರು ಜನವರಿ 21: ಬಿಎಂಟಿಸಿ ಜನರಿಗೆ ಸಹಾಯವಾಗಲಿ ಎಂದು ಯುಪಿಐ ಪೇಮೆಂಟ್ ವ್ಯವಸ್ಥೆ ಮಾಡಿದರೆ ಅದೇ ಸಂಸ್ಥೆಯ ಕಂಡಕ್ಟರ್ ಅದರಲ್ಲಿ ತಮ್ಮದೇ ಯುಪಿಐ ಕೋಡ್ ಬಳಸಿ ಸಂಸ್ಥೆಗೆ ಸಾವಿರಾರು ರೂಪಾಯಿ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಮೂವರು ಕಂಡಕ್ಟರ್ ಗಳು ಸಿಕ್ಕಿಬಿದ್ದಿದ್ದು, ಯುಪಿಐ ಸ್ಕ್ಯಾನರ್ ಟಿಕೆಟ್ ವ್ಯವಸ್ಥೆ ದುರುಪಯೋಗಪಡಿಸಿಕೊಂಡ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ನಿರ್ವಾಹಕರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ನಿರ್ವಾಹಕ ಸುರೇಶ್ (ಘಟಕ 23) ,ಚಾಲಕ-ನಿರ್ವಾಹಕ ಮಂಚೇಗೌಡ (ಘಟಕ-3), ನಿರ್ವಾಹಕ ಅಶ್ವಾಕ್ಖಾನ್(ಘಟಕ-14) ಸೇವೆಯಿಂದ ಅಮಾನತುಗೊಂಡವರು.
ಬಿಎಂಟಿಸಿ ಸಂಸ್ಥೆಯು ಚಿಲ್ಲರೆ ಸಮಸ್ಯೆ ಪರಿಹಾರದ ಭಾಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಯುಪಿಐ ಸ್ಕ್ಯಾನರನ್ನು ಪ್ರತಿ ಬಸ್ಗಳಲ್ಲಿ ಅಳವಡಿಸಿದೆ. ಆದರೆ, ಈ ನಿರ್ವಾಹಕರು ಟಿಕೆಟ್ ನೀಡುವಾಗ ಬಿಎಂಟಿಸಿಯ ಅಧಿಕೃತವಾದ ಯುಪಿಐ ಸ್ಕ್ಯಾನರ್ ಬಳಸದೆ ತಮ್ಮ ವೈಯಕ್ತಿಕ ಯುಪಿಐ ಖಾತೆಗೆ ಸಾವಿರಾರು ರೂಪಾಯಿ ಟಿಕೆಟ್ ಮೊತ್ತವನ್ನು ಪಾವತಿಸಿಕೊಂಡು ದುರ್ಬಳಕೆ ಮೂಲಕ ನಿಗಮದ ಹಣಕಾಸು ಶಿಸ್ತು ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಿಎಂಟಿಸಿ ಪರಿಶೀಲನಾ ತಂಡಗಳು ಈ ಬಗ್ಗೆ ಪರಿಶೀಲನೆ ನಡೆಸುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರಣೆ ಹಾಗೂ ವಿಸ್ತೃತ ಪರಿಶೀಲನೆ ವೇಳೆ ನಿರ್ವಾಹಕ ಸುರೇಶ್ 47,257 ರೂ. ಮೊತ್ತವನ್ನು ತಮ್ಮ ಯುಪಿಐ ಖಾತೆಗೆ ಹಾಕಿಸಿಕೊಂಡಿದ್ದಾರೆ. ಇನ್ನು ಮಂಚೇಗೌಡ 54,358 ರೂ. ಹಾಗೂ ಅಶ್ವಾಕ್ಖಾನ್ 3,206 ರೂ. ಮೊತ್ತವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ದುರುಪಯೋಗಪಡಿಸಿಕೊಂಡಿರುವುದು ಗೊತ್ತಾಗಿದೆ. ಈ ಹಿನ್ನೆಲೆ ಮೂವರ ವಿರುದ್ಧ ಶಿಸ್ತುಕ್ರಮದ ಭಾಗವಾಗಿ ಮುಂದಿನ ವಿಚಾರಣೆವರೆಗೂ ಅಮಾನತುಗೊಳಿಸಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಕ್ರಮ ವಹಿಸಿದ್ದಾರೆ.